ಲಂಡನ್: ಭಾರತಕ್ಕೆ ಹಸ್ತಾಂತರ ಪ್ರಕರಣದ ವಿಚಾರಣೆ ಸಂಬಂಧ ಸೋಮವಾರ ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಉದ್ಯಮಿ ವಿಜಯ್ ಮಲ್ಯ ಹಾಜರಾದರು. ಡಿಸೆಂಬರ್ 4ರಿಂದ 8 ದಿನಗಳ ಕಾಲ ಪ್ರಕರಣದ ವಿಚಾರಣೆ ನಿಗದಿಯಾಗಿದೆ.
ಹಸ್ತಾಂತರ ಪ್ರಕರಣದಲ್ಲಿ ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ವಾರಂಟ್ ಜಾರಿಗೊಳಿಸಿದ ಬಳಿಕ ಜಾಮೀನಿನ ಮೇಲೆ ಹೊರಗಿರುವ ಮಲ್ಯ ಅವರಿಗೆ ಡಿಸೆಂಬರ್ 4ರ ವಿಚಾರಣೆಗೆ ಹಾಜರಾಗುವಂತೆ ವೆಸ್ಟ್ಮಿನಿಸ್ಟರ್ ನ್ಯಾಯಾಲಯ ಸೂಚನೆ ನೀಡಿತು. ಅಲ್ಲಿಯವರೆಗೂ ಜಾಮೀನಿನ ನಿಯಮಗಳು ಜಾರಿಯಲ್ಲಿರಲಿವೆ ಎಂದು ನ್ಯಾಯಾಲಯ ಹೇಳಿತು.
ನ್ಯಾಯಾಲಯದ ಹೊರಗಡೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಲ್ಯ, ‘ಕೋರ್ಟ್ನಲ್ಲಿ ಎಲ್ಲವೂ ತಿಳಿಯಲಿದೆ. ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಪುನರುಚ್ಚರಿಸಿದರು.
‘ದಾಖಲೆಗಳನ್ನು ನ್ಯಾಯಾಧೀಶರಾದ ಅರ್ಬುತ್ನೋಟ್ ಅವರಿಗೆ ಕಳೆದ ವಾರವೇ ಸಲ್ಲಿಸಿದ್ದೇವೆ. ಚೆಂಡು ಈಗ ಭಾರತ ಸರ್ಕಾರದ ಅಂಗಳದಲ್ಲಿದೆ. ಮುಂದಿನ ವಾರದೊಳಗೆ ಸರ್ಕಾರದ ಪರ ವಕೀಲರು ಅದಕ್ಕೆ ಪ್ರತಿಕ್ರಿಯೆ ಸಲ್ಲಿಸಬೇಕು’ ಎಂದು ಮಲ್ಯ ಅವರ ಕಾನೂನು ತಂಡದ ಮುಖ್ಯಸ್ಥ ಕಾರ್ಲ್ ಮಾಂಟ್ಗೊಮೆರಿ ಹೇಳಿದ್ದಾರೆ.
ತ್ವರಿತ ವಿಚಾರಣೆಗೆ ಆಗ್ರಹಿಸಿರುವ ಅವರು, ವಿಚಾರಣೆ ವಿಳಂಬವಾದಲ್ಲಿ ಭಾರತ ಸರ್ಕಾರಕ್ಕೆ ಹೊಸ ದಾಖಲೆಗಳನ್ನು ಸಲ್ಲಿಸಲು ಸಮಯಾವಕಾಶ ದೊರೆಯಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬ್ಯಾಂಕ್ಗಳಿಗೆ ಸುಮಾರು ₹9 ಸಾವಿರ ಕೋಟಿ ವಂಚಿಸಿದ ಆರೋಪ ಮಲ್ಯ ಅವರ ಮೇಲೆ ಇದೆ.