ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೂರು ವರ್ಷಕ್ಕೊಮ್ಮೆ ಆಯೋಜಿಸುವುದು ಸೂಕ್ತ ಎಂದು ನಟ ‘ಮುಖ್ಯಮಂತ್ರಿ’ ಚಂದ್ರು ಹೇಳಿರುವುದರಲ್ಲಿ (ಪ್ರ.ವಾ., ನ.19) ಅರ್ಥ ಇದೆ. ಹೀಗಾದರೆ ಸಮ್ಮೇಳನವನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸಬಹುದು. ಪ್ರತಿವರ್ಷ ಆಗುವ ದುಂದು ವೆಚ್ಚವನ್ನು ತಪ್ಪಿಸಬಹುದು.
ಪ್ರತಿವರ್ಷ ಸಮ್ಮೇಳನ ನಡೆಸುವುದರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಸಮ್ಮೇಳನದ ಲೆಕ್ಕ ಪತ್ರ ಕೊಡುವುದರಲ್ಲೇ ಕಾಲಹರಣ ಆಗುತ್ತದೆ. ಅನುದಾನಕ್ಕಾಗಿ ಸರ್ಕಾರದ ಕಡೆ ಕೈಚಾಚುವುದು; ಸಕಾಲಕ್ಕೆ ಹಣ ಬಿಡುಗಡೆ ಆಗಿಲ್ಲ ಎಂದು ಮಾಧ್ಯಮದೆದುರು ಬೊಬ್ಬೆ ಇಡುವುದು ಇವೆಲ್ಲಾ ಮಾಮೂಲು ಎಂಬಂತಾಗಿದೆ.
ಹಿಂದಿನ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಗೊಳಿಸುವುದು, ವರ್ಷವಿಡೀ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವುದು ಆಗಬೇಕು. ಒಂದು ಅಧ್ಯಕ್ಷರ ಅವಧಿಗೆ ಒಂದು ಸಮ್ಮೇಳನ ಸಾಕು. -ಡಾ.ಎಸ್.ಪಿ.ಗೌಡರ ಹಿರೇಕೆರೂರು, ಹಾವೇರಿ