ಬೆಂಗಳೂರು: ‘ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು (ತಿದ್ದುಪಡಿ) ಯಥಾವತ್ತಾಗಿ ಅನುಮೋದಿಸಬೇಕು’ ಎಂದು ಕರ್ನಾಟಕ ಜನಾರೋಗ್ಯ ಚಳವಳಿಯ ಮುಖಂಡ ಕ್ಷಿತಿಜ್ ಅರಸ್ ಒತ್ತಾಯಿಸಿದರು.
ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳ ಗರಿಷ್ಠ ಬೆಲೆ ನಿಗದಿಯನ್ನು ಕೈಬಿಟ್ಟರೆ ಮಸೂದೆಯ ಮೂಲ ಆಶಯವನ್ನೇ ಕೈಬಿಟ್ಟಂತಾಗುತ್ತದೆ’ ಎಂದರು.
‘ಜೆಲ್ಲಾ ಮಟ್ಟದ ಕುಂದುಕೊರತೆ ನಿವಾರಣಾ ಸಮಿತಿಯನ್ನು ಮಸೂದೆಯಿಂದ ಯಾವುದೇ ಕಾರಣಕ್ಕೂ ತೆಗೆದುಹಾಕಬಾರದು’ ಎಂದು ಆಗ್ರಹಿಸಿದರು.
ಕರ್ನಾಟಕ ಕೊಳೆಗೇರಿ ಜನಾಂದೋಲನ ಸಂಘಟನೆಯ ಮುಖಂಡ ಎ.ನರಸಿಂಹಮೂರ್ತಿ ಮಾತನಾಡಿ ‘ಖಾಸಗಿಆಸ್ಪತ್ರೆಗಳ ಪರವಾಗಿ ವಿರೋಧ ಪಕ್ಷಗಳು ನಿಂತಿವೆ. ಬಡರೋಗಿಗಳ ಹಕ್ಕುಗಳು, ಖಾಸಗಿ ಆಸ್ಪತ್ರೆಗಳಲ್ಲಿ ಅನುಭವಿಸುತ್ತಿರುವ ಶೋಷಣೆ ಬಗ್ಗೆ ಯಾರೂ ಪ್ರತಿಕ್ರಿಯೆ ನೀಡಿಲ್ಲ’ ಎಂದರು.
‘ಜನಪರ ಸಂಘಟನೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಖಾಸಗಿ ಆಸ್ಪತ್ರೆಗಳ ಮಾಲೀಕರೊಂದಿಗೆ ಸರ್ಕಾರ ಸಭೆ ನಡೆಸಿರುವುದು ಸರಿಯಲ್ಲ’ ಎಂದರು.