ಬಾಗಲಕೋಟೆ: ‘ಬೀಳಗಿ ಮತಕ್ಷೇತ್ರದ ಯಡಹಳ್ಳಿಯ ಅಜಾತ ನಾಗಲಿಂಗೇಶ್ವರ ಮಠದ ಅಭಿವೃದ್ಧಿಗಾಗಿ ಶಾಸಕರ ಪ್ರದೇಶಾಭಿವೃದ್ಧಿಯಿಂದ ₹ 15 ಲಕ್ಷ ಹಾಗೂ ಪ್ರವಾಸೋದ್ಯಮ ಇಲಾಖೆ ಯಿಂದ ₹ 25 ಲಕ್ಷ ಸೇರಿದಂತೆ ಒಟ್ಟು ₹ 40 ಲಕ್ಷ ಮಂಜೂರು ಮಾಡಲಾಗಿದೆ’ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ತಾಲ್ಲೂಕಿನ ಯಡಹಳ್ಳಿಯ ನಾಗಲಿಂಗೇಶ್ವರ ಮಠದಲ್ಲಿ ಸಿದ್ದರಾಮ ಶಿವಯೋಗಿಗಳ 43ನೇ ಪುಣ್ಯರಾಧನೆಯ ಹಾಗೂ ಜಾತ್ರಾ ಮಹೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಯಡಹಳ್ಳಿ ಗ್ರಾಮ ಮುಳುಗಡೆಯಾಗಿದೆ. ಆದರೆ ಈ ಮಠ ಮುಳುಗಡೆಯಾಗಿಲ್ಲ. ಹಾಗಾಗಿ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಯಾತ್ರಿ ನಿವಾಸ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ’ ಎಂದರು.
‘ಮುಳುಗಡೆ ಸಂತ್ರಸ್ತರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಸರ್ಕಾರ ಅವರ ಪರವಾಗಿದೆ. ಚಿಕ್ಕಗಲ ಗಲಿಯಲ್ಲಿ ನಡೆದ ಸಂತ್ರಸ್ತರ ಸಭೆಯಲ್ಲಿ 35 ರಿಂದ 40 ಬೇಡಿಕೆ ಇಡಲಾಗಿದೆ. ಸರ್ಕಾರದಿಂದ ₹ 600 ಕೋಟಿ ಬಿಡುಗಡೆಗೆ ಒತ್ತಾಯಿಸಲಾಗುತ್ತಿದೆ’ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಉಪಾದ್ಯಕ್ಷ ಮುತ್ತಪ್ಪ ಮನ್ನೇರಿ, ಸದಸ್ಯರಾದ ಮೇಲಿಗಿರಿಯಪ್ಪ ನೀಲಣ್ಣವರ, ಭರಮಪ್ಪ ಕೋಟಿ, ರಮೇಶ ನೀಲಣ್ಣವರ, ಶೇಖರಯ್ಯ ಹಿರೇಮಠ, ಪರಶುರಾಮ ಮಾದರ, ಸಿದ್ದರಾಮ ಪೂಜಾರಿ ಇದ್ದರು.