ಚಿಕ್ಕೋಡಿ: ನಿಪ್ಪಾಣಿ, ಮುಧೋಳ ರಾಜ್ಯ ಹೆದ್ದಾರಿಯನ್ನು ದ್ವಿಪಥ ರಸ್ತೆಯನ್ನಾಗಿ ಮಾಡುವ ವೇಳೆ ರಸ್ತೆ ಅಕ್ಕಪಕ್ಕದಲ್ಲಿ ಬೆಳೆದಿದ್ದ ಮರಗಳನ್ನು ಕಡೆಯಲಾಗಿತ್ತು. ಈಗ ಕಾಮಗಾರಿ ಮುಗಿಯಲು ಬಂದಿದ್ದರೂ ಸಸಿ ನೆಡುವ ಕಾರ್ಯ ಇನ್ನೂ ಆರಂಭವಾಗಿಲ್ಲ.
ಈ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವ ಉಸ್ತುವಾರಿಯನ್ನು ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆ–ಶಿಫ್) ನೀಡಿತ್ತು. 109 ಕಿ.ಮೀ ಉದ್ದದ ರಸ್ತೆಗೆ ₹ 350 ಕೋಟಿ ಅನುದಾನ ಬಿಡುಗಡೆ ಮಾಡಿತ್ತು.
2014ರ ಡಿಸೆಂಬರ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಎರಡು ವರ್ಷದಲ್ಲಿ ಕಾಮಗಾರಿ ಮುಗಿಸುವಂತೆ ಸೂಚಿಸಿದ್ದರು. ರಸ್ತೆ ನಿರ್ಮಾಣಕ್ಕೆ ಮರಕಡಿದ ಕಾರಣ ಕಾಮಗಾರಿಯ ಬಳಿಕ ರಸ್ತೆಯ ಎರಡೂ ಬದಿ ಮರಗಳನ್ನು ಬೆಳಸಬೇಕು ಎಂದೂ ಅವರು ಸೂಚಿಸಿದ್ದರು. ರಾಜ್ಯ ಹೆದ್ದಾರಿಯ ಕಾಮಗಾರಿ ಈಗ ಬಹುತೇಕ ಪೂರ್ಣಗೊಂಡಿದೆ.
ಕಾಮಗಾರಿಗೆ ಮಂಜೂರಾದ ಒಟ್ಟು ಅನುದಾನದಲ್ಲಿ ಶೇ 1ರಷ್ಟು ಹಣವನ್ನು ಮರ ಬೆಳೆಸುವ ಸಲುವಾಗಿಯೇ ಸರ್ಕಾರ ಮೀಸಲಿಟ್ಟಿದೆ. ಆದರೂ ಸಸಿಗಳನ್ನು ನೆಡುವ ಕಾರ್ಯ ಆರಂಭವಾಗಿಲ್ಲ. ಇದು ಇದು ಪರಿಸರ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
‘ಪ್ರತಿ ಒಂದು ಕಿ.ಮೀ.ಗೆ ಎರಡೂ ಬದಿಯಲ್ಲಿ 200 ಸಸಿಗಳನ್ನು ನೆಡಲು ಅರಣ್ಯ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಕೆ–ಶಿಫ್ ಬೆಳಗಾವಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಸಿ.ಬಾಗಲಕೋಟ ಹೇಳಿದರು.
‘ನಿಪ್ಪಾಣಿ–ಮುಧೋಳ ರಾಜ್ಯ ಹೆದ್ದಾರಿ ಮೇಲ್ದರ್ಜೆಗೇರಿಸಲು ಮಂಜೂರಾದ ಅನುದಾನದಲ್ಲಿ ಶೇ 1ರಷ್ಟು ಹಣವನ್ನು ಸಸಿ ನೆಡಲು ಮೀಸಲಿಡಲಾಗಿದೆ. ಸಸಿಗಳನ್ನು ನೆಡಲು ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅರಣ್ಯ ಇಲಾಖೆಯೇ ಸಸಿಗಳನ್ನು ನೆಡಲಿದೆ’ ಎಂದು ಅವರು ತಿಳಿಸಿದರು.