ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಕಲಿಸುವುದೇ ನೈಜ ರಾಜ್ಯೋತ್ಸವ’

Last Updated 21 ನವೆಂಬರ್ 2017, 9:39 IST
ಅಕ್ಷರ ಗಾತ್ರ

ಮಾಗಡಿ: ಕೇವಲ ನವೆಂಬರ್‌ ತಿಂಗಳ ಕನ್ನಡಿಗರಾಗದೆ, ರಾಜ್ಯದಲ್ಲಿ ನೆಲೆಸಿರುವ ಅನ್ಯಭಾಷಿಕರಿಗೆ ಕನ್ನಡ ಕಲಿಸುವುದೇ ನಿಜವಾದ ರಾಜ್ಯೋತ್ಸವ ಎಂದು ರಾಜ್ಯ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ತಿಳಿಸಿದರು. ಪಟ್ಟಣದಲ್ಲಿ ಸಮರ ಸಿಂಹ ಪಡೆ ಸಂಘಟನೆಯ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ರಾಜಕೀಯ ಬದಲಾವಣೆಯ ಗಾಳಿ ಬೀಳುತ್ತಿದೆ. ಜೆಡಿಎಸ್‌ ಪಕ್ಷದ ಎಚ್‌.ಡಿ.ಕುಮಾರಣ್ಣ ಅವರು ಮುಖ್ಯಮಂತ್ರಿಯಾಗುವುದು ಖಚಿತ. ಎ.ಮಂಜುನಾಥ ಅವರ ಕೈಬಲಪಡಿಸಲು ನಾವೆಲ್ಲರೂ ಸಿದ್ಧರಾಗಿದ್ದೇವೆ.ರಾಜ್ಯದಲ್ಲಿ ಕುಮಾರಣ್ಣ, ಮಾಗಡಿಯಲ್ಲಿ ಎ.ಮಂಜಣ್ಣ ಎಂಬ ಘೋಷಣೆ ಯುವಕರಲ್ಲಿ ಮನೆ ಮಾಡಿರುವುದು ಸಂತಸದಾಯಕವಾಗಿದೆ’ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಮಾತನಾಡಿ, ಸೇವೆ ಮಾಡುವವರನ್ನು ಗೌರವಿಸುವುದು ಕನ್ನಡಿಗರ ಮನೋಧರ್ಮವಾಗಿದೆ. ಕಾಂಗ್ರೆಸ್‌ ಪಕ್ಷದ ಕೆಲವರು ನೀಡಿದ ಕಿರುಕುಳದಿಂದ ಬೇಸತ್ತು ಪಕ್ಷ ಬಿಡಬೇಕಾಯಿತು. ನನ್ನನ್ನು ಬೆಂಬಲಿಸಿದ ಕಾರ್ಯಕರ್ತರ ರಕ್ಷಣೆ ನನಗೆ ಬಹುಮುಖ್ಯವಾಗಿದೆ’ ಎಂದರು.

‘ಪುರಸಭೆಯನ್ನು ನಮ್ಮಿಂದ ಕಸಿದುಕೊಂಡರು. ನಾನು ಕಾಂಗ್ರೆಸ್‌ ಪಕ್ಷದಲ್ಲಿ ಇದ್ದಾಗ ಆರಂಭಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮುಂದುವರೆಸಿಕೊಂಡು ಹೋಗದೆ ಕೈಬಿಟ್ಟಿದ್ದಾರೆ. ಫುಟ್‌ಪಾತ್‌ ವ್ಯಾಪಾರಿಗಳು, ಆಟೊ, ಕಾರು, ಟೆಂಪೊ ಚಾಲಕ ಮಾಲೀಕರನ್ನು ಒಕ್ಕಲೆಬ್ಬಿಸಿ, ಪುರಸಭೆಯ ಅಂಗಡಿ ಮಳಿಗೆಗಳನ್ನು ಕೆಡಹುವುದಾಗಿ ಬೆದರಿಕೆಗೆ ಹೆದರಬೇಡಿ. ಬಡವರ ಪರವಾಗಿ ಹೋರಾಟ ಮಾಡಲು ನನಗೆ ನಿಮ್ಮ ಬೆಂಬಲದ ಅಗತ್ಯವಿದೆ’‌ ಎಂದರು.

‘ರಂಗನಾಥ ಸ್ವಾಮಿ ಮತ್ತು ಕೆಂಪೇಗೌಡರ ಮೇಲೆ ಆಣೆ ಮಾಡುತ್ತೇನೆ. ಎಲ್ಲಾ ವರ್ಗದ ಬಡವರ ರಕ್ಷಣೆ ಮಾಡುವುದೇ ನನ್ನ ಜೀವನದ ಗುರಿಯಾಗಿದೆ. ಬ್ಲ್ಯಾಕ್‌ಮೇಲ್‌  ಮಾಡುವುವರ ವಿರುದ್ಧ ಹೋರಾಟ ನಡೆದಿದೆ. ಯುವಕರು ಮತ್ತು ಮಹಿಳೆಯರಿಗಾಗಿ ಸ್ಥಳೀಯವಾಗಿ ಉದ್ಯೋಗ ನೀಡುವ ಕಾರ್ಖಾನೆ ಆರಂಭಿಸುತ್ತೇನೆ’ ಎಂದರು. ಕಾರು ಚಾಲಕ ಹುಲ್ಲೂರಯ್ಯ ಅವರನ್ನು ಸನ್ಮಾನಿಸಿದರು.

ಪುರಸಭೆ ಸದಸ್ಯೆ ನಿರ್ಮಲಾ ಸೀತಾರಾಮ್‌, ಗ್ರಾಮ ಪಂಚಾಯಿತಿ ಸದಸ್ಯ ರಂಗಣ್ಣ, ಬಿಡದಿ ಪುರಸಭೆ ಸದಸ್ಯರಾದ ರಮೇಶ್‌, ಕುಮಾರ್‌, ಹೊಸಪೇಟೆ ಅಶ್ವಥ್‌, ವಿಶ್ವನಾಥ್‌, ಅನಿಲ್‌ಕುಮಾರ್‌, ಸಮರ ಸಿಂಹ ಪಡೆಯ ಚಿಕ್ಕರಾಜು ಹಾಗೂ ಪದಾಧಿಕಾರಿಗಳು ಇದ್ದರು, ಸಂಗೀತ ಸಂಜೆ ನಡೆಯಿತು, ಪಟ್ಟಣದ ಮಹಿಳೆಯರು, ಯುವಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT