ಶಿವಮೊಗ್ಗ: ಲಕ್ಷ್ಮೀ ಚಿತ್ರಮಂದಿರದ ಬಳಿಯ ವೆಂಕಟೇಶ ನಗರದ ಕಾಲುವೆ ಏರಿಯಾ ನಿವಾಸಿಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿ ಸೋಮವಾರ ರಸ್ತೆ ತಡೆ ನಡೆಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಅನೇಕ ವರ್ಷಗಳಿಂದ ಈ ಸ್ಥಳದಲ್ಲಿ ವಾಸವಾಗಿದ್ದೇವೆ, ಈಚೆಗೆ ಇಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ವ್ಯಕ್ತಿಯೊಬ್ಬರು ಖಾಸಗಿ ಲೇಔಟ್ ನಿರ್ಮಾಣಕ್ಕೆ ಮುಂದಾಗಿದ್ದು, ಅಧಿಕಾರಿಗಳು ಸರ್ವೇ ನಡೆಸಿ ಐದು ಮನೆಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನೆ ತೆರವುಗೊಳಿಸಲು ನಿರಾಕರಿಸಿದ ಸಂದರ್ಭದಲ್ಲಿ ಜಯನಗರ ಠಾಣೆ ಇನ್ಸ್ಪೆಕ್ಟರ್ ಮಹಿಳೆಯರನ್ನು ಅವಾಚ್ಯವಾಗಿ ನಿಂಧಿಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಲೇಔಟ್ ನಿರ್ಮಾಣವೇ ಅನಧೀಕೃತವಾಗಿದ್ದು, ಅನೇಕ ವರ್ಷಗಳಿಂದ ಕಾಲುವೆ ಏರಿಯಾ ನಿವಾಸಿಗಳನ್ನು ತೆರವುಗೊಳಿಸಬಾರದು ಎಂದು ಆಗ್ರಹಿಸಿದರು. ರಸ್ತೆ ತಡೆಯಿಂದಾಗಿ ಕೆಲವು ಕಾಲ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದರು.