ಹಿರಿಯೂರು: ‘ಸಾವಯವ ಪದ್ಧತಿಯಲ್ಲಿ ಬೆಳೆದ ಸಿರಿಧಾನ್ಯಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಬೇಡಿಕೆ ಇರುವ ಬೆಳೆಯನ್ನು ಬೆಳೆಯುವ ಮೂಲಕ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು’ ಎಂದು ಪ್ರಗತಿಪರ ರೈತ ಎಂ.ಮಹಲಿಂಗಪ್ಪ ಸಲಹೆ ನೀಡಿದರು.
ಕೃಷಿ ಇಲಾಖೆ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ ಮತ್ತು ಶ್ರೀದೇವಿ ಸಾವಯವ ಕೃಷಿಕರ ಸಂಘದ ಆಶ್ರಯದಲ್ಲಿ ತಾಲ್ಲೂಕಿನ ಪರಮೇನಹಳ್ಳಿಯಲ್ಲಿ ರೈತರೊಬ್ಬರ ಜಮೀನಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ಬೆಳೆಗಳ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವ್ಯವಸಾಯ ಮಾಡುವ ಭೂಮಿಯ ಆರೋಗ್ಯವನ್ನು ನಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕಾಪಾಡಿಕೊಳ್ಳಬೇಕು. ಸಾವಯವ ಕೃಷಿಯಿಂದ ವಿಷಕಾರಿಯಲ್ಲದ ಆಹಾರ ಉತ್ಪಾದನೆ ಆಗುತ್ತದೆ. ಇದಕ್ಕೆ ಹೆಚ್ಚು ಬೇಡಿಕೆ ಇದೆ’ ಎಂದು ಅವರು ತಿಳಿಸಿದರು.
ಕೃಷಿ ಅಧಿಕಾರಿ ಎಂ.ಮಹಮದ್ ಮುಸ್ತಾಕ್ ಅಹಮದ್ ಮಾತನಾಡಿ, ‘ಸಿರಿಧಾನ್ಯಗಳಿಗೆ ಇಲಾಖೆಯಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಾಯಧನ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
ಒಕ್ಕೂಟದ ಅಧಿಕಾರಿ ಡಿ.ಲೋಕೇಶ್ ಮಾತನಾಡಿದರು. ಗೋಪಾಲನಾಯ್ಕ, ಆತ್ಮ ಅಧಿಕಾರಿ ನಾಗವೇಣಿ ರಮೇಶ್, ಪಿ.ಕೆ.ಪರಮೇಶ್, ಭೈರೇಶ್, ಪಿ.ಆರ್.ಮೋಹನ್, ಜೆ.ತಿಪ್ಪೇಸ್ವಾಮಿ ಹಾಗೂ ರೈತರು ಹಾಜರಿದ್ದರು.