ಮುಂಡರಗಿ: ‘ಸಾಹಿತಿ ಬರೆದಿದ್ದೆಲ್ಲವನ್ನೂ ಓದುಗರು ಸ್ವೀಕರಿಸಲಾರರು. ವಾಸ್ತವಿಕ ಬದುಕಿನ ಚಿತ್ರಣಗಳು ನೈಜವಾಗಿದ್ದರೆ ಮಾತ್ರ ಓದುಗರು ಅಂತಹ ಕೃತಿಯನ್ನು ಆಸ್ವಾದಿಸುತ್ತಾರೆ. ಓದುಗ ವರ್ಗವನ್ನು ಸಮ್ಮೋಹನಗೊಳಿಸುವ ಶೈಲಿ ಬರಹಗಾರರಿಗೆ ಅಗತ್ಯವಾಗಿದೆ’ ಎಂದು ರಾಮಗಿರಿಯ ವರಕವಿ ಡಾ.ದ.ರಾ.ಬೇಂದ್ರೆ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಡಾ.ಸಂಗಮೇಶ ತಮ್ಮನಗೌಡ್ರ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬಾಗೇವಾಡಿ ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ನಡೆದ 15ನೇ ‘ತಿಂಗಳ ಕವಿ ಅಂಗಳ ಮಾತು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಾಳೆಯಲ್ಲಿ ಗೀಚಿದ್ದೆಲ್ಲವೂ ಸಾಹಿತ್ಯವಾಗಲಾರದು. ಅಧ್ಯಯನ, ಜೀವನಾನುಭವ ಮತ್ತು ಲೋಕಾನುಭವ ಸಾಹಿತಿಗಳಿಗೆ ಇರಬೇಕಾಗುತ್ತದೆ. ಅಂತಹ ಸಾಹಿತಿಗಳಿಂದ ಮಾತ್ರ ಸತ್ವಯುತ ಸಾಹಿತ್ಯ ಹೊರಬರುತ್ತದೆ’ ಎಂದರು.
‘ಪ್ರತಿಯೊಬ್ಬ ಓದುಗನಿಗೂ ಸಾಹಿತ್ಯದ ಸಂಸ್ಕಾರ ಮುಖ್ಯ. ಓದು ಹಾಗೂ ಬರಹದ ಲಯ ಅರಿಯದವರು ಸಾಹಿತ್ಯವನ್ನು ರಚಿಸುವುದು ಮತ್ತು ಸಾಹಿತ್ಯವನ್ನು ಆಸ್ವಾದಿಸುವುದು ಕಷ್ಟಸಾಧ್ಯವಾಗುತ್ತದೆ’ ಎಂದು ಸಾಹಿತಿ ಸುಭಾಸ್ ಪೂಜಾರ ಹೇಳಿದರು.
ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎನ್.ಎಂ.ವಾರದ, ಶಂಕ್ರಪ್ಪ ಶಿಳ್ಳಿನ, ಎಸ್.ಸಿ.ಯಳವತ್ತಿ, ಎಸ್.ಬಿ.ಬಂಡಿವಡ್ಡರ, ಡಿ.ಕೆ.ಅತ್ತಾರ. ಎಚ್.ವೈ.ನದಾಫ, ಕಿರಣ ಲಮಾಣಿ, ಗಂಗಾಧರ ಕರಿನಿಂಗಪ್ಪನವರ, ಅಜಿತ ತಳವಾರ, ಶಾಂತು ಬಡ್ನಿ, ಮಲ್ಲೇಶ ಬಡಿಗೇರ, ಮಹೇಶ ನವಲಿ, ಎಸ್.ಬಿ.ಬಂಡಿವಡ್ಡರ ಇದ್ದರು.