ಬೆಂಗಳೂರು: ಮೈಸೂರಿನ ಆಂದೋಲನ ದಿನ ಪತ್ರಿಕೆಯ ಸಂಪಾದಕ ಮತ್ತು ಹಿರಿಯ ಪತ್ರಕರ್ತರಾದ ರಾಜಶೇಖರ್ ಕೋಟಿ ಹೃದಯಾಘಾತದಿಂದ ಗುರುವಾರ ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಕೋಟಿ ಅವರು ಪತ್ನಿ, ಒಬ್ಬ ಪುತ್ರ ,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ಹಿಂದಿರುಗುವ ಸಮಯದಲ್ಲಿ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಕೋಟಿ ಅವರ ಪಾರ್ಥೀವ ಶರೀರವನ್ನು ಮೈಸೂರಿನ ಸ್ವಗೃಹಕ್ಕೆ ತರಲಾಗಿದೆ.
ಗದಗ ಜಿಲ್ಲೆಯವರಾಗಿದ್ದ ಕೋಟಿ ಅವರು ನಾಡೋಜ ಪಾಟೀಲ ಪುಟ್ಟಪ್ಪ ಅವರ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ್ದರು. ಗದಗದಲ್ಲಿ ಆಂದೋಲನ ವಾರಪತ್ರಿಕೆಯನ್ನು ಆರಂಭಿಸಿದ ಅವರು ನಂತರ ಮೈಸೂರಿಗೆ ಬಂದು ನೆಲೆಸಿ ಆಂದೋಲನವನ್ನು ದಿನಪತ್ರಿಕೆಯಾಗಿ ರೂಪಿಸಿದರು.
ದಲಿತ, ರೈತ ಚಳವಳಿಗಳಲ್ಲಿ ಸಕ್ರಿಯರಾಗಿದ್ದ ಕೋಟಿ ಅವರು ರಾಜ್ಯೋತ್ಸವ ಪ್ರಶಸ್ತಿ, ಚರಕ ಪ್ರಶಸ್ತಿ, ಟಿಎಸ್ಆರ್ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.