ಶ್ರೀಧರ್ ಬಾಣಾಲ ಅವರು ಹೊಸದಾಗಿ ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ. ಇದಕ್ಕೆ ಅವರು ಆಯ್ಕೆ ಮಾಡಿಕೊಂಡಿರುವುದು ಸತ್ಯ ಕಥೆಯೊಂದನ್ನು. ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ತಂಡವು ಬೆಂಗಳೂರಿನಲ್ಲಿ ಆಯೋಜಿಸಿತ್ತು. ಸಿನಿಮಾ ಹೆಸರು ‘ಸರೋಜಾ’.
‘ನನಗೆ ಸಿನಿಮಾ ನಿರ್ದೇಶನದ ಅನುಭವ ಇಲ್ಲ. ನನ್ನ ಪತ್ನಿಯಿಂದ ಕಥೆಯನ್ನು ಕೇಳಿದ ನಂತರ ಸಿನಿಮಾ ಮಾಡಬೇಕು ಅನಿಸಿತು’ ಎಂದರು ಶ್ರೀಧರ್. ಆದರೆ ಸಿನಿಮಾದ ಕಥೆಯ ಬಗ್ಗೆ ಮಾಹಿತಿ ನೀಡಲಿಲ್ಲ. ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕ ಭಗವಾನ್ ಅವರೂ ಬಂದಿದ್ದರು. ‘ಇದು ಹೊಸಬರ ಪ್ರಯತ್ನ. ಹೊಸಬರನ್ನು ಪ್ರೋತ್ಸಾಹಿಸಬೇಕು’ ಎಂದರು ಭಗವಾನ್.
ನೆನಪಿನ ಅಂಗಳಕ್ಕೆ ಜಾರಿದ ಭಗವಾನ್, ‘ನನ್ನಿಂದ ಪಾಠ ಕಲಿತು ಅಂದಾಜು ಇನ್ನೂರೈವತ್ತು ಯುವಕರು ಇಂದು ಹಿರಿತೆರೆ, ಕಿರುತೆರೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಿಂತ ಇನ್ನೇನು ಬೇಕು’ ಎಂದರು.
ಕೊನೆಯಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ‘ನಿರ್ದೇಶಕರು ಕನ್ನಡ ಬಾರದಿದ್ದರೂ ಕನ್ನಡ ಸಿನಿಮಾ ಮಾಡುವ ಉತ್ಸಾಹ ತೋರಿಸಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.