ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಲ್ಲಿರುವ (ಪಿಎಂಎಲ್ಎ) ಆರೋಪಿಗೆ ಜಾಮೀನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದ ಸೆಕ್ಷನ್ 45 ಅನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಗುರುವಾರ ಘೋಷಿಸಿದೆ.
ಈ ಸೆಕ್ಷನ್ ಪ್ರಕಾರ, ಆರೋಪಿಯು ತಪ್ಪಿತಸ್ಥ ಅಲ್ಲ ಮತ್ತು ಮುಂದೆ ಇಂತಹ ಅಪರಾಧ ಎಸಗುವುದಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಆಗುವವರೆಗೆ ಜಾಮೀನು ಮಂಜೂರು ಮಾಡಲು ಅವಕಾಶ ಇಲ್ಲ.
‘ಯಾವುದೇ ಅಪರಾಧ ಪ್ರಕರಣದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಆರೋಪಿಯನ್ನು ನಿರಪರಾಧಿ ಎಂದೇ ಭಾವಿಸಬೇಕಾಗುತ್ತದೆ. ಇದು ಮೂಲ ತತ್ವ ಕೂಡ. ಆದರೆ, ಕಾಯ್ದೆಯ ಕಠಿಣ ನಿಯಮವು ಈ ತತ್ವಕ್ಕೆ ವಿರುದ್ಧವಾದುದು’ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.
‘ಪಿಎಂಎಲ್ಎ ಕಾಯ್ದೆಯ 45ನೇ ಸೆಕ್ಷನ್ ಸಂವಿಧಾನದ 21ನೇ ವಿಧಿಯಲ್ಲಿ ಹೇಳಲಾದ ಸಮಾನತೆ ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು ಉಲ್ಲಂಘಿಸುತ್ತದೆ’ ಎಂದು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಮತ್ತು ಸಂಜಯ್ ಕಿಶಲ್ ಕೌಲ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಜಾಮೀನಿಗೆ ಎರಡು ಷರತ್ತು
ಆರೋಪಿಗೆ ಜಾಮೀನು ಮಂಜೂರು ಮಾಡಲು ಪಿಎಂಎಲ್ಎಯ ಸೆಕ್ಷನ್ 45(1), ಎರಡು ಷರತ್ತುಗಳನ್ನು ಒಡ್ಡುತ್ತದೆ.
1. ಆರೋಪಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿರೋಧಿಸಲು ಪಬ್ಲಿಕ್ ಪ್ರಾಸಿಕ್ಯೂಟರ್ಗೆ ಕಡ್ಡಾಯವಾಗಿ ಅವಕಾಶ ನೀಡಬೇಕು
2. ಪಬ್ಲಿಕ್ ಪ್ರಾಸಿಕ್ಯೂಟರ್ ಅರ್ಜಿಯನ್ನು ವಿರೋಧಿಸಿದ ಸಂದರ್ಭದಲ್ಲಿ, ಆರೋಪಿಯು ಅಪರಾಧ ಮಾಡಿಲ್ಲ ಮತ್ತು ಜಾಮೀನಿನ ಮೇಲೆ ಹೊರಗಡೆ ಇದ್ದ ವೇಳೆ ಅಂತಹ ಅಪರಾಧವನ್ನು ಮತ್ತೆ ಎಸಗುವುದಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಆಗಬೇಕು.