ಅರಸೀಕೆರೆ: ಹಳೆಯ ಕಾಲದ ಬುಡ್ಡ ಭತ್ತದ ತಳಿಯೊಂದಿಗೆ ಈಚಿನ ಹೊಸ ತಳಿಯಾದ ಐ.ಆರ್ 64 ತಳಿಯನ್ನು ಸಂಸ್ಕರಿಸಿ ಏರೋಬಿಕ್ ಭತ್ತದ ತಳಿಯನ್ನು ಸಂಶೋಧಿಸಲಾಗಿದೆ ಎಂದು ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ಕಿಸಾನ್ ಕ್ರಾಪ್ನ ಸಂಶೋಧನಾ ನಿರ್ದೇಶಕ ಡಾ.ಎಚ್.ಈ.ಶಶಿಧರ್ ತಿಳಿಸಿದರು.
ತಾಲ್ಲೂಕಿನ ದೇಶಾಣಿ ಗ್ರಾಮದ ಕೃಷಿಕ ನಂಜುಂಡಪ್ಪ ಅವರ ಹೊಲದಲ್ಲಿ ಬೆಳೆದಿರುವ ಏರೋಬಿಕ್ ಭತ್ತದ ತಳಿಯ ಬಗ್ಗೆ 150ಕ್ಕೂ ಹೆಚ್ಚು ರೈತರಿಗೆ ಪ್ರಾತ್ಯಕ್ಷಿಕೆ ನಡೆಸಿ ಅವರು ಮಾತನಾಡಿದರು.
ಏರೋಬಿಕ್ ಭತ್ತದ ತಳಿಯಿಂದ ಭೂಮಿಯ ಮಣ್ಣಿನ ಫಲವತ್ತತೆ ಅವಲಂಬಿಸಿ ಒಂದು ಹೆಕ್ಟೇರ್ಗೆ 55 ಕ್ವಿಂಟಲ್ಗಿಂತಲೂ ಹೆಚ್ಚಿನ ಇಳುವರಿ ಪಡೆಯಬಹುದು. ಇದರ ಬೆಳವಣಿಗೆ ಹಾಗೂ ರುಚಿ ಸಾಮಾನ್ಯ ಭತ್ತದಂತೆ ಇರುವುದರಿಂದ ರೈತರು ನಿವ್ವಳ ಲಾಭ ಗಳಿಸ ಬಹುದು ಎಂದು ಹೇಳಿದರು.
ಶೇ 50ಕ್ಕೂ ಕಡಿಮೆ ನೀರಿನ ಬಳಕೆ, ಕಡಿಮೆ ಕೂಲಿ ಕಾರ್ಮಿಕರು, ಹಸಿರುಮನೆ ಅನಿಲಗಳ ಹೊರಸೂಸುವಿಕೆಯಲ್ಲಿ ಗಣನೀಯ ಇಳಿಕೆ ಇವು ಈ ತಳಿಯ ಉಪಯೋಗಗಳು ಎಂದು ವಿವರಿಸಿದರು.
ಪಶ್ಚಿಮ ಬಂಗಾಳದ ಕಿಸಾನ್ ಕ್ರಾಪ್ಟ್ನ ಸಂಶೋಧನಾ ನಿರ್ದೇಶಕ ಸಮರೇಂದ್ರ ಸಾಹೋ, ತಳಿ ಅಭಿವೃದ್ಧಿ ಅಧಿಕಾರಿಗಳಾದ ವಿನೋದ್, ಸೌಜನ್ಯಾ, ಮಂಜುಳಾ ಬಸವರಾ ಜ್, ರೈತರಾದ ರಾಮೇಗೌಡ, ಉಮೇಶ್ ಹಾಗೂ ದೇಶಾಣಿ ಸುತ್ತಮುತ್ತಲ ಹಳ್ಳಿಗಳ ರೈತರು ಪಾಲ್ಗೊಂಡಿದ್ದರು.