ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಕೃಷಿ ಮೇಳ: ಸಕಲ ಸಿದ್ಧತೆ

Last Updated 24 ನವೆಂಬರ್ 2017, 8:15 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೃಷಿ ಸಂಶೋಧನಾ, ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನವೆಂಬರ್‌ 25ರಿಂದ 27ರವರಗೆ ಇಲ್ಲಿನ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ಮೇಳವನ್ನು ಆಯೋಜಿಸಲಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸಂಶೋ
ಧನಾ ಕೇಂದ್ರದ ಯೋಜನಾ ನಿರ್ದೇಶಕ ಡಾ.ಡಿ.ಎಂ.ಮಣ್ಣೂರ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಮೇಳದಲ್ಲಿ ಹೊಸ ಬಗೆಯ ತೊಗರಿ, ಕಡಲೆ, ಹಿಂಗಾರು ಜೋಳದ ತಳಿಗಳ ಪರಿಚಯ, ವಿವಿಧ ಬೆಳೆಗಳ ಆಧುನಿಕ ಬೇಸಾಯ ವಿಧಾನಗಳ ಪ್ರಾತ್ಯಕ್ಷಿಕೆ ಇರಲಿದೆ. ರೈತರ ಬೆಳೆ ಹಾಗೂ ಮಾರಾಟ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮೇಳದಲ್ಲಿ ಕೃಷಿ ಯಂತ್ರೋಪಕರಣ ಪ್ರದರ್ಶನ, ವಿವಿಧ ತಳಿಗಳ ಕುರಿ, ಕೋಳಿ, ಶ್ವಾನ ಹಾಗೂ ಇತರ ಜಾನುವಾರುಗಳ ಪ್ರದರ್ಶನವಿದೆ. ಜೇನು ಸಾಕಾಣಿಕೆ, ಎರೆಹುಳು ಗೊಬ್ಬರ ಘಟಕ, ಮೇವು ಪ್ರಾತ್ಯಕ್ಷಿಕೆ, ಮಣ್ಣು ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ದೊರಕಲಿದೆ. ರೈತರಿಗಾಗಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ’ ಎಂದರು.

‘ಮೇಳದಲ್ಲಿ ಸಮಗ್ರ ಕೃಷಿ ಪದ್ಧತಿ ಕುರಿತು ಸಲಹೆ, ರೈತರಿಗೆ ಕಾನೂನು ಅರಿವು ಹಾಗೂ ನೆರವಿನ ಮಾಹಿತಿ ನೀಡಲಾಗುವುದು. ಪ್ರಗತಿಪರ ರೈತರೊಂದಿಗೆ ಸಂವಾದ ನಡೆಯಲಿದೆ. ಕೃಷಿ ಮೇಳದಲ್ಲಿ ಭಾಗವಹಿಸುವ ರೈತರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಿಟಿ ಬಸ್‌ ನಿಲ್ದಾಣ ಹಾಗೂ ಸೂಪರ್‌ ಮಾರ್ಕೆಟ್‌ನಿಂದ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘25ರಂದು ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್‌ ಪಾಟೀಲ ಉದ್ಘಾಟಿಸಲಿದ್ದು, ಶ್ರೀಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸಪ್ಪ ಅಪ್ಪ ಸಾನ್ನಿಧ್ಯ ವಹಿಸುವರು. ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಂ.ಸಾಲಿಮಠ, ಸಚಿವರಾದ ಸಿ.ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಭಗವಂತ ಖೂಬಾ, ಬಸವರಾಜ ಪಾಟೀಲ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮಲಾಜೆ, ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಭಾಗವಹಿಸುವರು’ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಿಜ್ಞಾನಿ ಡಾ.ರಾಜು ತೆಗ್ಗಳ್ಳಿ, ತಳಿ ಸಂಶೋಧಕ ಡಾ. ಮುನಿಸ್ವಾಮಿ, ಕೀಟ ತಜ್ಞ ರಾಜಪ್ಪ ಹಾವೇರಿ ಹಾಜರಿದ್ದರು.

ಔಷಧ ವಿತರಕರಿಗೆ ನೂತನ ಕೋರ್ಸ್‌
‘ಜಿಲ್ಲೆಯಾದ್ಯಂತ ಕೃಷಿ ಸಲಕರಣೆ ಮಾರಾಟ ಹಾಗೂ ರಸಗೊಬ್ಬರ, ಕೀಟನಾಶಕ ಔಷಧಿ ಮಳಿಗೆ ತೆರೆದಿರುವ ಮಾಲೀಕರಿಗೆ ಕೃಷಿ ಸಂಶೋಧನಾ ಕೇಂದ್ರದಲ್ಲಿ ನೂತನ ಡಿಪ್ಲೊಮಾ ಕೋರ್ಸ್‌ ಆರಂಭಿಸಲಾಗಿದ್ದು, ಒಂದು ವರ್ಷದ ಈ ಕೋರ್ಸ್‌ ಕಲಿಕೆ ಕಡ್ಡಾಯಗೊಳಿಸಲಾಗಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಜು ತೆಗ್ಗಳ್ಳಿ ತಿಳಿಸಿದರು.

ಹೈದರಾಬಾದ್‌ನ ಮ್ಯಾನೇಜ್‌ ಸಂಸ್ಥೆ ಹಾಗೂ ಕೆವಿಕೆ ಸಹಯೋಗದಲ್ಲಿ ಈ ಕೋರ್ಸ್‌ ಆರಂಭಿಸಲಾಗಿದೆ. ಡಿಸೆಂಬರ್‌ 1ರಿಂದ ಪ್ರತಿ ಭಾನುವಾರ ತರಗತಿಗಳು ಆರಂಭವಾಗಿದ್ದು, 48 ವಾರಗಳ ಅವಧಿಯ ಕೋರ್ಸ್‌ ಅನ್ನು 2019ರ ಒಳಗಾಗಿ ಎಲ್ಲ ಕೃಷಿ ಉತ್ಪನ್ನ ಹಾಗೂ ಔಷಧಿ ಅಂಗಡಿ ಮಾಲೀಕರು ಪಡೆಯಬೇಕು. ಇಲ್ಲದಿದ್ದಲ್ಲಿ ಕೃಷಿ ಉತ್ಪನ್ನ ಅಂಗಡಿಗಳ ಪರವಾನಗಿಯನ್ನು ನವೀಕರಣ ಮಾಡಲಾಗುವುದಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT