ಮುಂಡರಗಿ: ‘ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಶೇ 3ರಷ್ಟು ಮೀಸಲಾತಿಯನ್ನು ಶೇ 7ಕ್ಕೆ ಏರಿಸಬೇಕು. ಆ ಮೂಲಕ ಪರಿಶಿಷ್ಟ ಪಂಗಡದ ಜನತೆಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ರಾಜ್ಯ ಸರ್ಕಾರವು ಮುಂದಾಗಬೇಕು’ ಎಂದು ಸಂಸದ ಬಿ. ಶ್ರೀರಾಮುಲು ಒತ್ತಾಯಿಸಿದರು.
ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ ಶುಕ್ರವಾರ ಸಮೀಪದ ಹೆಸರೂರು ಗ್ರಾಮದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 7ಕ್ಕೆ ಏರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಧಿಕಾರ, ರಾಜಕೀಯಕ್ಕಿಂತ ಸಮಾಜದ ಸಂಘಟನೆ, ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ’ ಎಂದರು.
‘ಸಮಾಜವನ್ನು ಉದ್ಧರಿಸಿದ ಶರಣರು, ಮಹಾತ್ಮರು ಹಾಗೂ ದಾರ್ಶನಿಕರನ್ನು ಒಂದು ಜಾತಿ ಅಥವಾ ಒಂದು ಧರ್ಮಕ್ಕೆ ಸಿಮಿತಗೊಳಿಸಬಾರದು. ಅವರು ಎಲ್ಲ ಧರ್ಮ ಹಾಗೂ ಜಾತಿಯ ಜನರಿಗೂ ಸೇರಿದವರಾಗಿದ್ದು, ಎಲ್ಲರೂ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯಬೇಕು’ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಅಭಿಪ್ರಾಯಪಟ್ಟರು.
ರಾಜನಹಳ್ಳಿಯ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ‘ಮಹಾತ್ಮರ ಜಯಂತಿಗಳು ಜಾತ್ರೆಯಾಗಬಾರದು. ಅಂತಹ ಸಮಾರಂಭಗಳಲ್ಲಿ ಜನ ಹಾಗೂ ಸಮಾಜವನ್ನು ಪರಿವರ್ತಿಸುವ ಚಿಂತನೆಗಳು ನಡೆಯಬೇಕು. ಎಲ್ಲ ಮಹಾತ್ಮರೂ ಶಾಂತಿ ಸಂದೇಶವನ್ನೇ ಸಾರಿದ್ದು, ನಾವೆಲ್ಲರೂ ಅವರ ತತ್ವಾದರ್ಶಗಳನ್ನು ಪಾಲಿಸಬೇಕು’ ಎಂದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ಸಣ್ಣವೀರಪ್ಪ ಹಳ್ಳೆಪ್ಪನವರ ಮಾತನಾಡಿದರು. ವೈ.ಎನ್.ಗೌಡರ ಉಪನ್ಯಾಸ ನೀಡಿದರು. ಹೆಸರೂರು ಗ್ರಾಮ ಪಂಚಾಯಿತಿ ಸದಸ್ಯ ಗರುಡಪ್ಪ ಜಂತ್ಲಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯಿತಿ ಸದಸ್ಯ ರುದ್ರಗೌಡ ಪಾಟೀಲ, ಎ.ಪಿ.ಎಂ.ಸಿ. ಸದಸ್ಯ ರವೀಂದ್ರ ಉಪ್ಪಿನಬೆಟಗೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರುತಿ ಹೊಸಮನಿ, ಮುಖಂಡರಾದ ಕೆ.ವಿ.ಹಂಚಿನಾಳ, ಭೀಮಸಿಂಗ ರಾಠೋಡ, ಕುಮಾರಸ್ವಾಮಿ ಹಿರೇಮಠ, ಮೈಲಾರೆಪ್ಪ ಕಲಕೇರಿ, ಬಿ.ಎಫ್.ಈಟಿ, ಎಂ.ಬಿ.ತಿಮ್ಮಾಪುರ, ರಜನೀಕಾಂತ ದೇಸಾಯಿ, ಭೀಮಣ್ಣ ಪೂಜಾರ, ವೀರಣ್ಣ ಜಲ್ಲಿಗೇರಿ ಕಾರ್ಯಕ್ರಮದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.