ಮೈಸೂರು: ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಸಭಾಂಗಣವನ್ನು ಸ್ಫೋಟಿಸುವ ಬೆದರಿಕೆಯ ಅನಾಮಧೇಯ ಪತ್ರವೊಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ (ಡಿಡಿಪಿಐ) ಕಚೇರಿಗೆ ಬಂದಿದೆ.
‘ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತ್ಯ ಹಾಗೂ ಮುಸ್ಲಿಂ ಶಿಕ್ಷಕರನ್ನು ಕಡೆಗಣಿಸಲಾಗಿದೆ. ಇದು ತೀರಾ ಖಂಡನೀಯ’ ಎಂದು ಪತ್ರದಲ್ಲಿ ನಮೂದಿಸಲಾಗಿದೆ. ಪತ್ರವನ್ನು ಕಡೆಗಣಿಸದಂತೆ ಎಚ್ಚರಿಕೆಯ ಕರೆ ಕೂಡ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂರು ದಿನಗಳ ಹಿಂದೆ ಬಂದಿರುವ ಬೆದರಿಕೆ ಪತ್ರವನ್ನು ಡಿಡಿಪಿಐ ಮಂಜುಳಾ ಅವರು ಪೊಲೀಸ್ ಕಮಿಷನರ್ ಡಾ.ಎ.ಸುಬ್ರಮಣ್ಯೇಶ್ವರ ರಾವ್ ಅವರಿಗೆ ರವಾನಿಸಿದ್ದಾರೆ. ಈ ಸಂಬಂಧ ಮೈದಾನಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.