ಉಡುಪಿ: ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಗಾಲಿ ಕುರ್ಚಿಯಲ್ಲಿಯೇ ಕುಳಿತು ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು. ಭಕ್ತರು ಹಾಗೂ ಸಂತರಲ್ಲಿ ಅವರು ಉತ್ಸಾಹ ತುಂಬಿದರು. ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಅವರು ಕುದುರೆ ಏರಿ ಬಂದರು.
ರಾಜಾಂಗಣದಿಂದ ಧರ್ಮ ಸಂಸತ್ ನಡೆಯುವ ರಾಯಲ್ ಗಾರ್ಡನ್ವರೆಗೆ ಶೋಭಾ ಯಾತ್ರೆ ಏರ್ಪಡಿಸಲಾಗಿತ್ತು. ಸ್ವಾಮೀಜಿ ಅವರಿಗೆ ಪಾದಪೂಜೆ ಮಾಡುವ ಮೂಲಕ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು.
ಭಾರಿ ಸಂಖ್ಯೆಯಲ್ಲಿ ಸೇರಿದ್ದ ಸಂತರು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡರು. ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಪೇಜಾವರ ಸ್ವಾಮೀಜಿ ಅವರು ಯಾತ್ರೆಯಲ್ಲಿ ಪಾಲ್ಗೊಳ್ಳಲೇಬೇಕು ಎಂಬ ಬಯಕೆ ಹೊಂದಿದ್ದ ಕಾರಣ ಗಾಲಿ ಕುರ್ಚಿಯಲ್ಲಿ ಕರೆದೊಯ್ಯಲಾಯಿತು. ಚೆಂಡೆ ಹಾಗೂ ವಾದ್ಯ ತಂಡಗಳು ಮೆರವಣಿಗೆಗೆ ಇಂಬು ನೀಡಿದವು. ‘ಜೈ ಶ್ರೀರಾಮ್’, ‘ಭಾರತ್ ಮಾತಾಕಿ ಜೈ’ ಘೋಷಣೆಗಳು ಮೊಳಗಿದವು. ಕಲ್ಸಂಕ ಮಾರ್ಗವಾಗಿ ಸಾಗಿದ ಶೋಭಾ ಯಾತ್ರೆ ರಾಯಲ್ ಗಾರ್ಡ್ನ್ನಲ್ಲಿ ಅಂತ್ಯವಾಯಿತು.
ಪುತ್ತಿಗೆ ಮಠದ ಸಗುಣೇಂದ್ರತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭ ಸ್ವಾಮೀಜಿ ಪಾಲ್ಗೊಂಡಿದ್ದರು.
ಕನಕ ಮಂಟಪದಲ್ಲಿ ಸನ್ಮಾನ:
ಶೋಭಾ ಯಾತ್ರೆಗೂ ಮೊದಲು ಕನಕ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ ಭಾಗವತ್ ಅವರಿಗೆ ವಿಶ್ವೇಶತೀರ್ಥ ಸ್ವಾಮೀಜಿ ಭಾರತ ಮಾತೆಯ ಮೂರ್ತಿ ನೀಡಿ ಸನ್ಮಾನಿಸಿದರು. ರಾಮಚಂದ್ರಾಪುರ ಮಠದ ರಾಘವೇಶ್ವರಭಾರತಿ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ನ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಇದ್ದ