ಕಲಬುರ್ಗಿ: ಹಿಂದೂ ಧರ್ಮದ ರಕ್ಷಣೆಗಾಗಿ ಭಾರತ ಸಂವಿಧಾನ ಬದಲಿಸುವಂತೆ ಪೇಜಾವರಶ್ರೀ ನೀಡಿರುವ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸದಸ್ಯರು ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಎದುರು ಶನಿವಾರ ರಸ್ತೆ ನಡೆಸಿದರು.
‘ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸತ್ನಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸಂವಿಧಾನ ಕುರಿತು ನೀಡಿರುವ ಹೇಳಿಕೆ ಖಂಡನೀಯ. ಸಂವಿಧಾನದ ಮಹತ್ವವನ್ನು ಅರಿಯದವರು ಮಾತ್ರ ಇಂತಹ ಹೇಳಿಕೆ ನೀಡಲು ಸಾಧ್ಯ. ಹಿಂದೂ ಧರ್ಮದ ರಕ್ಷಣೆಗಾಗಿ ಸಂವಿಧಾನವನ್ನೇ ಬದಲಾಯಿಸಲು ಮುಂದಾಗಿರುವ ಪೇಜಾವರಶ್ರೀಗಳನ್ನು ಗಡಿಪಾರು ಮಾಡಬೇಕು’ ಎಂದು
ಒತ್ತಾಯಿಸಿದರು.
‘ಭಾರತದ ಸಂವಿಧಾನವು ವಿಶ್ವದಲ್ಲಿಯೇ ಶ್ರೇಷ್ಠವಾಗಿದೆ. ಸರ್ವರಿಗೂ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಧರ್ಮನಿರಾಪೇಕ್ಷತೆಯನ್ನು ಒದಗಿಸಿಕೊಟ್ಟಿದೆ. ಈ ಕಾರಣಕ್ಕಾಗಿಯೇ ಭಾರತ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಂತಹ ಸಂವಿಧಾನವನ್ನು ಬದಲಾಯಿಸಬೇಕು ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಭಟನೆ ಮಾಡಿದ್ದರಿಂದ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು. ಸಮಿತಿಯ ಮುಖಂಡರಾದ ವಿಠಲ ದೊಡ್ಡಮನಿ, ಸಂತೋಷ ಪಾಳಾ, ಪ್ರಕಾಶ ಅವರಾದಕರ್, ಲಕ್ಷ್ಮಿಕಾಂತ, ವಿನೋದ ಕಾಂಬಳೆ, ದಿಗಂಬರ ಬೆಳಮಗಿ, ಸತೀಶ ಇದ್ದರು.