ಶ್ರವಣಬೆಳಗೊಳ: ಮಹಾ ಮಸ್ತಕಾಭಿಷೇಕ ಮಹೋತ್ಸವ ನಿಮಿತ್ತ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಉಪನಗರಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಉತ್ತಮವಾಗಿ ಮೂಡಿಬರುವಂತೆ ಕ್ರಮಕೈಗೊಳ್ಳಲಾಗುವುದು ಎಂದು ನಿರ್ಮಾಣ ಉಸ್ತುವಾರಿ ಹೊತ್ತಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್ಡಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾರೆಡ್ಡಿ ಹೇಳಿದರು.
ಉಪ ನಗರಗಳ ನಿರ್ಮಾಣ ಕಾರ್ಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಎಲ್ಲ ನಗರಗಳನ್ನು ಸಂಪರ್ಕಿಸಲು 80 ಅಡಿ ರಿಂಗ್ ರಸ್ತೆ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ಬಾಹುಬಲಿ ರಸ್ತೆ ಎಂದು ನಾಮಕರಣ ಮಾಡಬಹುದಾಗಿದೆ' ಎಂದರು.
ಎಲ್ಲಾ ನಗರಗಳಿಗೆ ತೀರ್ಥಂಕರ ಹೆಸರುಗಳನ್ನು ಇಡುವ ಬಗ್ಗೆ ಕ್ಷೇತ್ರದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ನುಡಿದರು.
ತಾತ್ಕಾಲಿಕ ನಗರಗಳನ್ನು ನಿರ್ಮಾಣ ಮಾಡುತ್ತಿರುವ ಜಾಗದಲ್ಲಿ ದೊರೆಯುವ ಕಲ್ಲುಬಂಡೆಗಳನ್ನು ಬಳಸಿಕೊಂಡು ಅಲಂಕಾರಿಕವಾಗಿ ಜೋಡಿಸಿ, ಚೆಂದಕಾಣುವಂತೆ ಮಾಡುವ ಯೋಜನೆ ಇದೆ ಎಂದು ವಿವರಿಸಿದರು.
ಎಲ್ಲಾ ನಗರಗಳಿಗೆ ಅತ್ಯುತ್ತಮವಾದ ದೀಪದ ವ್ಯವಸ್ಥೆಯಾಗಬೇಕು. ಅಲ್ಲದೆ, ಈ ಮಾರ್ಗದಲ್ಲಿರುವ ಮರಗಳಿಗೂ ವಿದ್ಯುತ್ ದೀಪಗಳ ಅಲಂಕಾರ ಮಾಡಿ ಅಲ್ಲಿನ ಸೌಂದರ್ಯವನ್ನು ಹೆಚ್ಚಿಸಲು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾತ್ಕಾಲಿಕ ಉಪನಗರಗಳಲ್ಲಿ ಮುಖ್ಯವಾದ ಸ್ವಯಂಸೇವಕ ನಗರದ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು. ಇನ್ನು 15 ದಿನಗಳಲ್ಲಿ ತ್ಯಾಗಿನಗರ ಪೂರ್ಣ ಗೊಳ್ಳಲಿದೆ ಎಂದು ತಿಳಿಸಿದರು. ಮುಂದಿನ ಹಂತದಲ್ಲಿ ಪಂಚ ಕಲ್ಯಾಣ ನಗರ ಸೇರಿ ಇನ್ನುಳಿದ ಉಪನಗರಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ನಿಗದಿತ ಅವಧಿಯಲ್ಲಿ ಅಚ್ಚು ಕಟ್ಟಾದ ವ್ಯವಸ್ಥೆ ಕಲ್ಪಿಸಲು ಬದ್ದರಾಗಿದ್ದೇವೆ ಎಂದು ತಿಳಿಸಿದರು. ಸಮಿತಿ ವಿಶೇಷಾಧಿಕಾರಿ ಬಿ.ಎನ್.ವರಪ್ರಸಾದರೆಡ್ಡಿ, ಸಿಪಿಐ ಹರೀಶ್ ಬಾಬು, ಕಾರ್ಯಪಾಲಕ ಎಂಜಿನಿಯರ್ ಲಕ್ಷ್ಮೀಕಾಂತ್, ಪುಟ್ಟಸ್ವಾಮಿ, ಹಿಮಾಂಶು ಲಲ್ಲೂ ಇದ್ದರು.