ನರಗುಂದ: ‘ಮಹದಾಯಿಗಾಗಿ ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಾಜ್ಯ ಸರ್ಕಾರ ಕೇಂದ್ರದ ಮೇಲೆ, ಕೇಂದ್ರ ಸರ್ಕಾರ ರಾಜ್ಯದ ಮೇಲೆ ಗೂಬೆ ಕೂರಿಸುತ್ತಾ ಕಾಲಹರಣ ಮಾಡುತ್ತಿದೆ. ಮುಖ್ಯವಾಗಿ ಈ ಭಾಗದ ಸಂಸದರು ಗಮನ ಹರಿಸುತ್ತಿಲ್ಲ. ಸಂಸದರ ದಿವ್ಯ ನಿರ್ಲಕ್ಷ್ಯದಿಂದ ಇದಕ್ಕೆ ಹಿನ್ನೆಡೆಯಾಗಿದೆ’ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 864ನೇ ದಿನ ಶನಿವಾರ ಅವರು ಮಾತನಾಡಿದರು. ‘ಈ ಭಾಗದ ಶಾಸಕರು ಮಹದಾಯಿ ಬಗ್ಗೆ ನೆಪಕ್ಕೋಸ್ಕರ ಮಾತನಾಡಿದರೆ, ಧಾರವಾಡ, ಬೆಳಗಾವಿ, ಬಾಗಲಕೋಟೆ ಸಂಸದರು ನೆನಪಾದಾಗ ಮಾತನಾಡುತ್ತಾರೆ.
ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಗೋವಾದಲ್ಲಿ ಬಿಜೆಪಿ ಸರ್ಕಾರ ಇದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಇದರಿಂದ ಈಗ ಇದಕ್ಕೆ ಬಿಜೆಪಿ ನಾಯಕರ ಪ್ರಯತ್ನ ಅಗತ್ಯವಾಗಿದೆ, ಇಲ್ಲವಾದರೆ ಈ ಯೋಜನೆ ಮತ್ತೇ ನೆನೆಗುದಿಗೆ ಬೀಳುತ್ತದೆ. ಈಗಾಗಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಡಿ. 15ರ ಒಳಗಾಗಿ ಸಿಹಿ ಸುದ್ದಿ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅದು ಹುಸಿಯಾಗಬಾರದು’ ಎಂದರು.
ಹೋರಾಟ ಸಮಿತಿ ಸದಸ್ಯ ಎಸ್.ಬಿ.ಜೋಗಣ್ಣವರ ಮಾತನಾಡಿದ, ‘ಮಹದಾಯಿ ನೀರು ಹರಿಸುವಲ್ಲಿ ರಾಜಕೀಯ ಪ್ರತಿಷ್ಠೆ ಬಿಡಬೇಕು. ಇಲ್ಲವಾದರೆ ಮಂದಿನ ಚುನಾವಣೆ ದಿನಗಳು ಕಷ್ಟದ ದಿನಗಳು ಎಂಬುದನ್ನು ಜನಪ್ರತಿನಿಧಿಗಳು ಅರಿತುಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು.