ಮೈಸೂರು: ಸಂವಿಧಾನ ತಿದ್ದುಪಡಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿ ನೀಡಿರುವ ಹೇಳಿಕೆಗೆ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯ ಅಂಗಳದಲ್ಲಿ ಭಾನುವಾರ ಪ್ರತಿಭಟನೆ ವ್ಯಕ್ತವಾಯಿತು.
‘ಸಮಕಾಲೀನ ಸಂದರ್ಭ: ಬಹುತ್ವದ ಸವಾಲುಗಳು’ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ.ಕಾಳೇಗೌಡ ನಾಗವಾರ ಮಾತು ಮುಗಿಸುತ್ತಿದ್ದಂತೆ ವೇದಿಕೆ ಎದುರು ಧಾವಿಸಿದ ಕೆಲವರು, ಪೇಜಾವರ ವಿರುದ್ಧ ಘೋಷಣೆ ಕೂಗಿದರು. ‘ಪೇಜಾವರ ಶ್ರೀ ದೇಶ ಬಿಟ್ಟು ತೊಲಗಲಿ’ ಎಂದು ಆಗ್ರಹಿಸಿದರು.
ಏಕಾಏಕಿ ಎದುರಾದ ಪ್ರತಿಭಟನೆಯನ್ನು ಕಂಡು ಆಯೋಜಕರು ಅಚ್ಚರಿಗೊಂಡರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಹಾಜರಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಹೊರಗೆ ಕಳುಹಿಸಿದರು.
‘ಧರ್ಮ ಸಂಸತ್ತು ಮೂಲಕ ಚಾತುರ್ವರ್ಣ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಮಹಿಳೆಯರು ಹಾಗೂ ದಲಿತರನ್ನು ಅಂಚಿಗೆ ತಳ್ಳಲು ಹುನ್ನಾರ ನಡೆಸುತ್ತಿದ್ದಾರೆ’ ಎಂದು ಚಿಂತಕಿ ಡಾ.ಮೀನಾಕ್ಷಿ ಬಾಳಿ ಆಕ್ರೋಶ ವ್ಯಕ್ತಪಡಿಸಿದರು.
ಸಾಹಿತಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ, ಬಿ.ಚಂದ್ರೇಗೌಡ, ಡಾ.ಮಹದೇವ ಭರಣಿ ಇತರರು ಇದ್ದರು.