ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಭಾ ಯಾತ್ರೆಯಲ್ಲಿ ಜನ ಸಾಗರ

Last Updated 27 ನವೆಂಬರ್ 2017, 5:34 IST
ಅಕ್ಷರ ಗಾತ್ರ

ಉಡುಪಿ: ಹಿಂದೂ ಸಮಾಜೋತ್ಸವದ ಅಂಗವಾಗಿ ಭಾನುವಾರ ಮಧ್ಯಾಹ್ನ ಇಲ್ಲಿ ನಡೆದ ಶೋಭಾ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡರು. ಕಲಾ ತಂಡಗಳು ಮೆರವಣಿಗೆಗೆ ರಂಗು ತುಂಬಿದವು.

ನಗರದ ಜೋಡುಗಟ್ಟೆಯಿಂದ ಮಧ್ಯಾಹ್ನ 2.30ರ ಸುಮಾರಿಗೆ ಮೆರವಣಿಗೆ ಆರಂಭವಾಯಿತು. ಅದಾಗಲೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವಿಎಚ್‌ಪಿ. ಬಜರಂಗದಳ, ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ಮೂಲಕ ಸಾಗಿದರು.

ತಲೆಗೆ ಕೇಸರಿ ಪಟ್ಟಿ ಧರಿಸಿ, ಕೈಯಲ್ಲಿ ಭಗವಾಧ್ವಜ, ಕೇಸರಿ ಧ್ವಜ, ಹನುಮಂತನ– ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವಿದ್ದ ಧ್ವಜ ಹಿಡಿದ ನೂರಾರು ತಂಡಗಳು ‘ನಾವೆಲ್ಲ ಹಿಂದೂ ನಾವೆಲ್ಲ ಒಂದು’ ಘೋಷಣೆ ಕೂಗಿದವು.

ಬೃಹತ್ ಗಾತ್ರದ ಧ್ವಜ ಹಿಡಿದಿದ್ದ ಯುವಕರು ಗಮನ ಸೆಳೆದರು. ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸುಮಾರು 4  ಕಿ.ಮೀ.ವರೆಗೂ ಜನರು ಇದ್ದರು. ಮೆರವಣಿಗೆ ಆರಂಭವಾದ ಒಂದು ಗಂಟೆವರೆಗೂ ಇನ್ನೂ ಜನರು ಬರುತ್ತಲೇ ಇದ್ದರು. ನಗರದ ಕಿನ್ನಿಮೂಲ್ಕಿ, ಕರಾವಳಿ ಜಂಕ್ಷನ್, ಅಂಬಲಪಾಡಿ ಹಾಗೂ ಮಣಿಪಾಲದ ಮಾರ್ಗವಾಗಿ ತಂಡೋಪತಂಡವಾಗಿ ಜನರು ಬರುತ್ತಿದ್ದರು.

ದ್ವಿಚಕ್ರ ವಾಹನದಲ್ಲಿ ಬಂದಿದ್ದವರು ವಾಹನಗಳನ್ನು ಅಜ್ಜರಕಾಡು ಉದ್ಯಾನದ ಬಳಿ ಪಾರ್ಕಿಂಗ್ ಮಾಡಿದ್ದರು. ಎಲ್ಲ ವಾಹನಗಳ ಹಿಂಬದಿಯಲ್ಲಿ ಕೇಸರಿ ಧ್ವಜ ಕಟ್ಟಲಾಗಿತ್ತು.

ಭಾಗವಹಿಸಿದ್ದ ಪ್ರತಿಯೊಬ್ಬರ ಕೈಯಲ್ಲಿಯೂ ಕೇಸರಿ ಧ್ವಜ ಇದ್ದಿದ್ದು ಇನ್ನೊಂದು ವಿಶೇಷತೆಯಾಗಿತ್ತು. ಮೆರವಣಿಗೆ ಹೊರಟ ಅರ್ಧ ಗಂಟೆಯ ನಂತರವೂ ಸಂಘಟನೆಯವರು ಧ್ವಜಗಳನ್ನು ತರಿಸಿ ಎಲ್ಲರಿಗೂ ನೀಡಿದರು. ಗುಲ್ಬರ್ಗ, ದೊಡ್ಡಬಳ್ಳಾಪುರ, ಬೆಂಗಳೂರು ಮುಂತಾದ ಊರುಗಳಿಂದ ಒಂದೊಂದು ಬಸ್‌ನಲ್ಲಿ ಜನರು ಬಂದಿದ್ದರು.

ಗಮನ ಸೆಳೆದ ಸ್ತಬ್ಧಚಿತ್ರ: ಹನುಮಂತ, ರಾಮ ಮತ್ತು ಸೀತೆಯನ್ನು ಅಂಗೈಯಲ್ಲಿ ಹಿಡಿದು ಹಾರುತ್ತಿರುವ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು. ಶಿವಾಜಿ ಮಹಾರಾಜರ ದರ್ಬಾರ್ ಬಿಂಬಿಸುವ ಪಾತ್ರಧಾರಿಗಳು ವಾಹನದಲ್ಲಿ ಕುಳಿತು ಜನರನ್ನು ಆಕರ್ಷಿಸಿದರು. ಪುಟ್ಟ ಬೈಕ್‌ನಲ್ಲಿ ಸವಾರಿ ಮಾಡಿದ ವ್ಯಕ್ತಿಯೊಬ್ಬ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ. ಪುಟ್ಟ ಮಕ್ಕಳಿಗೆ ಕೊಡಿಸುವ ಆಟಿಕೆ ಬೈಕ್ ಅಂತೆ ಇತ್ತು. ಅದರಲ್ಲಿಯೇ ಆತ ಸುತ್ತಾಟ ನಡೆಸಿದ. ಮಹಾತ್ಮ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರಧಾರಿಗಳು ತೆರೆದ ಜೀಪ್‌ನಲ್ಲಿ ಮೆರವಣಿಗೆ ನಡೆಸಿದರು.

ಜಿಲ್ಲಾ ಸಮಸ್ತ ಮುಸ್ಲಿಂ ಸಮುದಾಯದವರು ಹಾಗೂ ಪೇಜಾವರ ಬ್ಲಡ್ ಗ್ರೂಪ್ ತಂಡದವರು ಮೆರವಣಿಗೆಯಲ್ಲಿ ಬಂದವರಿಗೆ ಹಣ್ಣಿನ ರಸ ನೀಡಿದರು. ಕುಣಿದು ದಣಿದಿದ್ದವರು ಒಂದು– ಎರಡು ಲೋಟ ಹಣ್ಣಿನ ರಸ ಕುಡಿದು ಬಾಯಾರಿಕೆ ತಣಿಸಿಕೊಂಡರು.

ಮೆರವಣಿಗೆ ಸಾಗುವ ವೇಳೆ ಖಾಸಗಿ ವಾಹನಗಳ ಓಡಾಟಕ್ಕೆ ಸ್ವಲ್ಪ ತೊಂದರೆ ಆಯಿತು. ಅದರ ಮಧ್ಯೆ ಬಂದ ಅಂಬುಲೆನ್ಸ್‌ಗೆ ದಾರಿ ಮಾಡಿಕೊಡಲಾಯಿತು. ಕೆ.ಎಂ. ಮಾರ್ಗದ ಒಂದೇ ಬದಿಯಲ್ಲಿ ಮೆರವಣಿಗೆಗೆ ಅವಕಾಶ ಮಾಡಿಕೊಡಲಾಗಿತ್ತು. ಇನ್ನೊಂದು ಬದಿಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT