ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರುಗಳ ಅಬ್ಬರ, ಪ್ರೇಕ್ಷಕರು ತತ್ತರ

Last Updated 27 ನವೆಂಬರ್ 2017, 6:55 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿ ಕಣಿವೆಯಲ್ಲಿ ನಡೆದ ಏಷ್ಯಾ ಪೆಸಿಫಿಕ್‌ ರ‍್ಯಾಲಿಯ ಕೊನೆ ದಿನವಾದ ಭಾನುವಾರ ಕಾಫಿ ಎಸ್ಟೇಟ್‌ಗಳಲ್ಲಿ ಕಾರುಗಳ ಅಬ್ಬರ ನೋಡಿ ಪ್ರೇಕ್ಷಕರು ಸಂಭ್ರಮಿಸಿದರು.

ಮೋಟಾರ್‌್ಸ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಚಿಕ್ಕಮಗಳೂರು (ಎಂಎಸ್‌ಸಿಸಿ), ಕಾಫಿ ಡೇ ಪ್ರಾಯೋಜಕತ್ವದಲ್ಲಿ ಮೂರು ದಿನ ನಡೆದ ಈ ರ‍್ಯಾಲಿಯಲ್ಲಿ ಕಾರುಗಳ ಓಟ ಕಂಡು ಪ್ರೇಕ್ಷಕರು ಚಕಿತರಾದರು. ರ‍್ಯಾಲಿಯ ಕೊನೆ ದಿನವಾದ ಭಾನುವಾರ ಏಪಿಆರ್‌ಸಿ ಕೊನೆಯ ನಾಲ್ಕು ಹಂತಗಳು ಮತ್ತು ಕಾಫಿ 500 ರ‍್ಯಾಲಿ ನಡೆದವು.

ಮೂಡಿಗೆರೆ ತಾಲ್ಲೂಕಿನ ಜಾಗೀರ ಮನೆ, ಚಂದ್ರಾಪುರ, ಚಟ್ನಹಳ್ಳಿ ಕಾಫಿ ತೋಟಗಳ ಓರೆಕೋರೆ ಮಾರ್ಗದಲ್ಲಿ ದೇಶವಿದೇಶಗಳ ಚಾಲಕರು ಕಾರು ಗಳನ್ನು ಮಿಂಚಿನ ವೇಗದಲ್ಲಿ ಚಲಾ ಯಿಸಿ ಸಂಚಲನ ಮೂಡಿಸಿದರು. ಬೆಳಿಗ್ಗೆ 9.30ರ ಹೊತ್ತಿಗೆ ರ‍್ಯಾಲಿ ಆರಂಭವಾಯಿತು.

ಶರವೇಗದಲ್ಲಿ ದೂಳೆಬ್ಬಿಸಿಕೊಂಡು ಕಾರುಗಳ ಸಾಗಿದ ಪರಿಯನ್ನು ಪ್ರೇಕ್ಷಕರು ರೆಪ್ಪೆ ಮಿಟುಕಿಸದಂತೆ ಕಣ್ತುಂಬಿಕೊಂಡರು. ದೇಶದ ಅಗ್ರ ಶ್ರೇಯಾಂಕದ ಚಾಲಕ ಗೌರವ್‌ಗಿಲ್‌–ಬೆಲ್ಜಿಯಂನ ಸಹಚಾಲಕ ಸ್ಟೀಫನ್‌ ಪ್ರೆವೊಟ್ ಜೋಡಿ ಫ್ಯಾಬಿಯಾನ್‌ ಚಲಾಯಿಸಿದ ಸ್ಕೋಡಾ ಫ್ಯಾಬಿಯಾ ಆರ್‌–5 ಕಾರಿನ ಕಲರವಕ್ಕ ಮಾರು ಹೋಗದವರೇ ಇರಲಿಲ್ಲ. ಎಲ್ಲರೂ ಗೌರವ್‌ ಹೆಸರು ಗುನುಗುತ್ತಿದ್ದರು. ಚಟ್ಟನಹಳ್ಳಿಯ ಕಾಫಿ ಎಸ್ಟೇಟ್‌ನ ತಿರುವು ಮುರುವು, ಕೆರೆ ದಿಣ್ಣೆ, ಇಳಿಜಾರು, ತಿರುವು, ಗದ್ದೆ ಸಾಲಿನ ಬದುವಿನ ಕಿರಿದಾದ ಮಾರ್ಗದಲ್ಲಿ ಕಾರುಗಳು ನುಗ್ಗುವುದನ್ನು ಕಂಡು ಪ್ರೇಕ್ಷಕರು ನಿಬ್ಬೆರಗಾದರು.

ಕಾಫಿ ತೋಟಗಳು ಕಾರ್ಮಿಕರು, ಸುತ್ತಮುತ್ತಲಿನ ಊರುಗಳ ಜನರು ಕುಟುಂಬ ಸಮೇತರಾಗಿ ರ‍್ಯಾಲಿ ವೀಕ್ಷಣೆಗೆ ಬಂದಿದ್ದರು. ಮರಗಳು, ತೋಟದಲ್ಲಿನ ದಿಣ್ಣೆಗಳು, ಗದ್ದೆ ಬದುಗಳು, ಕರೆ ಏರಿಗಳ ಮೇಲೆ ನಿಂತು ರ‍್ಯಾಲಿಯನ್ನು ಕಣ್ತುಂಬಿಕೊಂಡರು. ಕಾರುಗಳ ಓಟವನ್ನು ರ‍್ಯಾಲಿ ಪ್ರಿಯರು, ಅಭಿಮಾನಿಗಳು, ಪ್ರೇಕ್ಷಕರು ಮೊಬೈಲ್‌ ಕ್ಯಾಮೆರಾಗಳಲ್ಲಿ ಸೆರೆ ಹಿಡಿದರು. ಇನ್ನು ಕೆಲವರು ವಿಡಿಯೊ ಮಾಡಿಕೊಂಡರು. ಕೆಲವರು ದೂರದಿಂದಲ್ಲೇ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಯುದ್ಧ ವಿಮಾನ, ರಾಕೆಟ್‌ಗಳಂತೆ ಶಬ್ದ ಹೊರಡಿಸುತ್ತಾ, ಮುಗಿಲೆತ್ತರಕ್ಕೆ ದೂಳೆ ಬ್ಬಿಸಿ ತೋಟದೊಳಗಿನ ಮಾರ್ಗದಲ್ಲಿ ಕಾರುಗಳು ನುಗ್ಗಿ ಪ್ರೇಕ್ಷಕರಿಗೆ ಮುದ ನೀಡಿದವು.

ಕಾಫಿ 500ನಲ್ಲಿ ಭಾಗವಹಿಸಿದ್ದ ಕೇರಳದ ಕಾಸರಗೋಡಿನ ಮೊಹಿಯುದ್ದಿನ್‌ ಷರೀಫ್‌ ಮತ್ತು ಮುಜಿಬ್‌ ರೆಹಮಾನ್‌ ಜೋಡಿಯ ಕಾರು ಚಟ್ಟನಹಳ್ಳಿಯ ಹೊಂಡದ ಬಳಿ ಇಳಿಜಾರಿನಲ್ಲಿ ತಗ್ಗಿಗೆ ಇಳಿಯಿತು. ಚಾಲಕ ಕೌಶಲದಿಂದ ಮುನ್ನುಗ್ಗಿಸಿ ಕಾರನ್ನು ತಗ್ಗು ತಡಾಯಿಸಿದ ಪರಿಗೆ ಪ್ರೇಕ್ಷಕರು ಆಶ್ಚರ್ಯ ಚಕಿತರಾದರು. ಇದೇ ಕಾರು ಚೀಕನಹಳ್ಳಿಯ ಬಳಿ ಹಿಂದಿನ ಚಕ್ರ ವಾರೆಯಾಗಿ ದೋಷ ಕಾಣಿಸಿಕೊಂಡು ನಿಂತಿತು.

ಚಾಲಕ ಶೇಖ್‌ ರೆಹಮಾನ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಹಿಂದಿನ ಚಕ್ರದ ಬ್ಯಾಲೆನ್ಸ್‌ ವೈರ್‌ ತುಂಡಾಗಿ ಸಮಸ್ಯೆಯಾಗಿದೆ. ಸುತ್ತು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಚಾಲಕರ ಚಮತ್ಕಾರಗಳಿಗೆ ಪ್ರೇಕ್ಷಕರು ತಲೆದೂಗಿದರು. ಮಕ್ಕಳಿಂದ ಮುದುಕರವರೆಗೂ ಎಲ್ಲ ವಯೋ ಮಾನದವರು ರ‍್ಯಾಲಿ ವೀಕ್ಷಣೆಗೆ ಬಂದಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರು ರ‍್ಯಾಲಿಯನ್ನು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT