ಚಿತ್ರದುರ್ಗ: ನಗರ ವ್ಯಾಪ್ತಿಯಲ್ಲಿ 2017ರ ಜನವರಿಯಿಂದ ನ.25ರವರೆಗೆ 143 ಡೆಂಗಿ, 298 ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ. ಅವುಗಳ ನಿಯಂತ್ರಣ ಹಾಗೂ ರೋಗ ಲಕ್ಷಣಗಳ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು 40 ತಂಡಗಳನ್ನು ರಚಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಫಾಲಾಕ್ಷಪ್ಪ ತಿಳಿಸಿದ್ದಾರೆ.
‘ಪ್ರಜಾವಾಣಿ’ ಜತೆ ಭಾನುವಾರ ಮಾತನಾಡಿದ ಅವರು, ‘ಪ್ರತಿ ತಂಡದಲ್ಲಿ ಇಬ್ಬರಂತೆ ಒಟ್ಟು 80 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಹುತೇಕ ಪ್ರದೇಶಗಳಲ್ಲಿ ಭಿತ್ತಿಪತ್ರ ಕೂಡ ಹಂಚಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶುಕ್ರವಾರ ಆರೋಗ್ಯ ಇಲಾಖೆಯ ಕಿರಿಯ ಪುರುಷ ಮತ್ತು ಮಹಿಳಾ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಬಡಾವಣೆಗಳಿಗೆ ಭೇಟಿ ನೀಡಿ ಲಾರ್ವಾ ಸರ್ವೆ ಮಾಡಲಿದ್ದಾರೆ. ನಗರದಲ್ಲಿ ಅಂದಾಜು 38 ಸಾವಿರ ಮನೆಗಳಿದ್ದು, ಪ್ರತಿ ಮನೆಗೂ ಅವರು ಭೇಟಿ ನೀಡಲಿದ್ದಾರೆ.
ಯಾವ ಮನೆಯೂ ಇದರಿಂದ ಬಿಟ್ಟು ಹೋಗದಂತೆ ಎಚ್ಚರ ವಹಿಸಲಾಗಿದೆ. ಅದಕ್ಕಾಗಿ ಬುದ್ಧ ನಗರ, ಮಾರುತಿ ನಗರ, ನೆಹರೂ ನಗರದಲ್ಲಿ ಕೇಂದ್ರ ಸ್ಥಾಪಿಸಲಾಗಿದೆ. ಅಲ್ಲಿಂದಲೇ ನಿಗದಿ ಪಡಿಸಿದ ಶುಕ್ರವಾರ ಕಾರ್ಯ ಆರಂಭವಾಗುತ್ತದೆ ಎಂದು ಅವರು ಹೇಳಿದರು.
ಈಗಾಗಲೇ ಕೆಳಗೋಟೆ, ಅಂಬೇಡ್ಕರ್ ನಗರ, ಜೆಸಿಆರ್ ಬಡಾವಣೆ, ರಾಂದಾಸ್ ಕಾಂಪೌಂಡ್, ಆಜಾದ್ ನಗರ, ಮಂಡಕ್ಕಿ ಭಟ್ಟಿಗಳಿಗೆ ಭೇಟಿ ನೀಡಲಾಗಿದೆ. ಈಚೆಗೆ ಜೋಗಿ
ಮಟ್ಟಿ ರಸ್ತೆಯಲ್ಲಿ ಡೆಂಗಿ ಮತ್ತು ಚಿಕೂನ್ ಗುನ್ಯಾ ಪ್ರಕರಣ ಹೆಚ್ಚುತ್ತಿರುವ ಕಾರಣ ಅಲ್ಲಿಯೂ ಲಾರ್ವಾ ಸಮೀಕ್ಷೆ ಪ್ರಾರಂಭಿಸಲಾಗುವುದು. ಇಲಾಖೆಗೆ ನಾಗರಿಕರ ಸಹಕಾರ ಕೂಡ ಅಗತ್ಯ ಎಂದು ಅವರು ಮನವಿ ಮಾಡಿದರು.
ಅನುಸರಿಸಬೇಕಾದ ಕ್ರಮ
‘ಶೇಖರಿಸಿಟ್ಟ ನೀರನ್ನು ಒಂದು ವಾರದ ನಂತರ ಉಪಯೋಗಿಸಬೇಡಿ. ತೊಟ್ಟಿಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸಿ. ಸೊಳ್ಳೆ ಪರದೆಗಳನ್ನು ತಪ್ಪದೆ ಬಳಸಿ. ಮೈತುಂಬಾ ಬಟ್ಟೆ ಧರಿಸಿ. ಮನೆ ಮುಂಭಾಗದ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಿ. ಹೀಗೆ ಸೊಳ್ಳೆಗಳ ನಿಯಂತ್ರಣಕ್ಕೆ ಮುಂದಾಗಿ’ ಎಂದು ಮನೆಗಳಿಗೆ ಭೇಟಿ ನೀಡುವ ಸಿಬ್ಬಂದಿ ಮತ್ತು ಕಾರ್ಯಕರ್ತೆಯರು ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
* *
ಜ್ವರ, ಅಧಿಕ ತಲೆನೋವು, ಕೈಕಾಲು ನೋವು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಥವಾ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ.
ಫಾಲಾಕ್ಷಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.