ಚಿತ್ರದುರ್ಗ: ಜಿಲ್ಲೆಯ 34151 ಕುಟುಂಬಗಳಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಉಚಿತ ಅಡುಗೆ ಅನಿಲ ಘಟಕವನ್ನು ವಿತರಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ತಿಳಿಸಿದರು.
ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ₹4,040 ವೆಚ್ಚದಲ್ಲಿ ಗ್ಯಾಸ್ ಸ್ಟೌ, ಎರಡು ಅನಿಲ ತುಂಬಿದ ಸಿಲಿಂಡರ್ಗಳು, ರೆಗ್ಯಲೇಟರ್, ಪೈಪ್ ಸೇರಿದಂತೆ ಏಳು ವಸ್ತುಗಳನ್ನು ನೀಡಲಾಗುತ್ತದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ನೀಡುತ್ತಿರುವ ₹1,450 ಏನೇನೂ ಸಾಕಾಗುತ್ತಿಲ್ಲ. ಹೀಗಾಗಿ ನಮ್ಮ ಸರ್ಕಾರದ 'ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ' ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಯಲ್ಲಿ ಒಟ್ಟು 107354 ಬಿಪಿಎಲ್ ಕುಟುಂಬಗಳಿವೆ. ಅದರಲ್ಲಿ ಮೊದಲ ಹಂತವಾಗಿ 34151 ಮಂದಿಗೆ ವಿತರಿಸಿ, ನಂತರ ಒಂದು ವಾರದಲ್ಲಿ ಇನ್ನೊಂದು ಹಂತದಲ್ಲಿ ಉಳಿದವರಿಗೆ ನೀಡಲಾಗುತ್ತದೆ ಎಂದರು.
'ಫಲಾನುಭವಿಗಳನ್ನು ಆಯ್ಕೆ ಮಾಡಿದ ಮೇಲೆ ಸರ್ಕಾರದ ಅಧಿಕಾರಿಗಳೇ ಅವರನ್ನು ಕರೆಸಿ, ದಾಖಲಾತಿಗಳನ್ನು ಆನ್ ಲೈನ್ ಮೂಲಕ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.