ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರಗಳ ನಿರ್ಮಾಣ ಚುರುಕು

Last Updated 27 ನವೆಂಬರ್ 2017, 7:27 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಮಹಾ ಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಧಾರ್ಮಿಕ ಮತ್ತು ಇನ್ನಿತರೆ ಕಾರ್ಯಕ್ರಮ ನಡೆಯಲಿರುವ ಉಪ ನಗರಗಳ ನಿರ್ಮಾಣದ ಕಾಮಗಾರಿಗಳು ಹಾಸನ ಜಿಲ್ಲಾಡಳಿತದನೇತೃತ್ವದಲ್ಲಿ ಚುರುಕಾಗಿ ನಡೆಯುತ್ತಿದೆ.

ತಾತ್ಕಾಲಿಕ ಶೆಡ್‌ಗಳ ಮತ್ತು 12 ಉಪ ನಗರಗಳು ಶ್ರವಣಬೆಳಗೊಳ ಪಟ್ಟಣವೂ ಸೇರಿದಂತೆ ಹೋಬಳಿಯ ಗ್ರಾಮಗಳಾದ ಸುಂಡಹಳ್ಳಿ, ಹೊಸಹಳ್ಳಿ, ಕಂಠೀರಾಯಪುರ, ಕೊತ್ತನಘಟ್ಟ, ಕಬ್ಬಾಳು, ಜಿನ್ನೇನಹಳ್ಳಿ, ಬಸ್ತಿಹಳ್ಳಿ, ಬಿ.ಚೋಳೇನಹಳ್ಳಿ ಮತ್ತು ಪರಮ ಗ್ರಾಮ ವ್ಯಾಪ್ತಿಯಲ್ಲಿ ತಲೆಎತ್ತಲಿವೆ.

ಉದ್ದೇಶಿತ ಸ್ಥಳವನ್ನು 18 ಬ್ಲಾಕ್‌ಗಳಾಗಿ ವಿಂಗಡಿಸಿದ್ದು, ಧಾರ್ಮಿಕ ಮತ್ತು ಧಾರ್ಮಿಕೇತರ ಉಪ ನಗರಗಳ ನಿರ್ಮಾಣ ನಡೆದಿದೆ. ಪಂಚಕಲ್ಯಾಣ ನಗರ, ತ್ಯಾಗಿನಗರ, 4 ಕಳಸ ನಗರಗಳು, 2 ಸ್ವಯಂ ಸೇವಕ ನಗರಗಳು, ಜನ ಪ್ರತಿನಿಧಿ ನಗರ, ಮಾಧ್ಯಮ ನಗರ, ಅಧಿಕಾರಿಗಳ ನಗರ, ಯಾತ್ರಿ ನಗರ ಮುಖ್ಯವಾದುದಾಗಿದೆ.

ಇವುಗಳಿಗೆ ಹೊಂದಿಕೊಂಡಂತೆಯೇ ಮುಖ್ಯ ಸಭಾಂಗಣ ವೇದಿಕೆ, ಭೋಜನಾಲಯ, ಸಾಂಸ್ಕೃತಿಕ ವೇದಿಕೆ, ವಸ್ತು ಪ್ರದರ್ಶನ, ಇವುಗಳ ಜೊತೆಯಲ್ಲಿ ರಕ್ಷಣೆಗೆ ಆಧ್ಯತೆ ನೀಡಿದ್ದು, ಪೋಲೀಸ್‌ ಮತ್ತು ಅಗ್ನಿ ಶಾಮಕ ಠಾಣೆಗಳ ನಿರ್ಮಾಣ ಸೇರಿರುತ್ತದೆ.

ರಾಜ್ಯ ರಸ್ತೆ ಸಾರಿಗೆ ನಿಗಮದ ತಾತ್ಕಾಲಿಕ ಬಸ್‌ ನಿಲ್ದಾಣಗಳು ಇರಲಿವೆ. ವಾಹನಗಳ ಪಾರ್ಕಿಂಗ್‌ನೊಂದಿಗೆ ಅತಿ ಮುಖ್ಯ ಗಣ್ಯರ ಆಗಮನಕ್ಕಾಗಿ ಹೆಲಿಪ್ಯಾಡ್‌ ನಿರ್ಮಾಣ ಆಗಲಿದೆ. ಉಪ ನಗರಗಳನ್ನು ₹ 75 ಕೋಟಿ ವೆಚ್ಚದಲ್ಲಿ ಕೆ.ಆರ್‌.ಡಿ.ಸಿ.ಐ.ಎಲ್‌ ನಿರ್ವಹಿಸುತ್ತಿದ್ದಾರೆ.

ಸ್ವಾಧೀನ ಪಡೆದಿರುವ ಜಮೀನುಗಳ ಪೈಕಿ ಕೆಲವು ಪ್ರದೇಶ ಸರ್ಕಾರಿ ಮತ್ತು ಕ್ಷೇತ್ರಕ್ಕೆ ಒಳ ಪಟ್ಟಿರುತ್ತದೆ ಎಂದು ಮಹಾ ಮಸ್ತಕಾಭಿಷೇಕದ ವಿಶೇಷಾಧಿಕಾರಿ ಬಿ.ಎನ್‌. ವರಪ್ರಸಾದ್‌ ರೆಡ್ಡಿ ಹೇಳುತ್ತಾರೆ.

1ತಿಂಗಳಿನಿಂದ ಉಪ ನಗರಗಳ ನಿರ್ಮಾಣದ ಪ್ರದೇಶವನ್ನು ಜೆಸಿಬಿಗಳು, ಲೆವೆಲರ್‌ ಮತ್ತು ರೋಣ್‌ ಕಲ್ಲುಗಳಿಂದ ಭೂಮಿಯನ್ನು ಮಟ್ಟ ಮಾಡುವ ಕಾಮಗಾರಿಗಳು ಮುಗಿದಿದ್ದು, ಜಿಲ್ಲಾಡಳಿತವು ಯಾತ್ರಿಕರ ತಾತ್ಕಾಲಿಕ ವಸತಿ ಗೃಹಗಳ, ಇನ್ನಿತರ ನಿರ್ಮಾಣದ ಕಾಮಗಾರಿಗಳನ್ನು ಕೈಗೊಂಡಿರುತ್ತಾರೆ.

ಉಪ ನಗರಗಳಿಗೆ ನೀರು ಸರಬರಾಜು ಮಾಡಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯು ಸಿದ್ಧತೆ ಮಾಡಿಕೊಂಡಿದೆ. 5 ಲಕ್ಷ ಲೀಟರ್‌ ಸಾಮರ್ಥ್ಯದ ನೆಲ ಮಟ್ಟದ ಜಲ ಸಂಗ್ರಹಗಾರ ಮತ್ತು 2.5 ಲಕ್ಷ ಲೀಡರ್‌ ಸಾಮರ್ಥ್ಯದ ಸಂಗ್ರಹಗಾರ ಮತ್ತು ಪಂಪುಹೌಸ್‌ ನಿರ್ಮಾಣ ಆಗುತ್ತಿದೆ ಎಂದು ನಿರ್ಮಾಣ ಸ್ಥಳದಲ್ಲಿದ್ದ ಸಿಬ್ಬಂದಿ ತಿಳಿಸಿದರು.

ಉಪ ನಗರಗಳಿಗೆ ವಿದ್ಯುತ್‌ ಸರಬರಾಜುಗೆ ಟೆಂಡರ್‌ ಪ್ರಕ್ರಿಯೆ ಬಳಿಕ ವಿದ್ಯುತ್‌ ಕಂಬಗಳನ್ನು, ತಂತಿಗಳನ್ನು, ಟಿ.ಸಿ. ಮತ್ತು ಪರಿವರ್ತಕಗಳನ್ನು ಅಳವಡಿಸಲಾಗುವುದು ಎಂದು ಸಹಾಯಕ ಅಭಿಯಂತರ ಶ್ರೀಧರ್‌ ತಿಳಿಸಿದರು.

ತ್ಯಾಗಿಗಳು ಮತ್ತು ಅಧಿಕಾರಿಗಳಿಂದ ವೀಕ್ಷಣೆ:  ಶ್ರವಣಬೆಳಗೊಳ: ತಾತ್ಕಾಲಿಕ ಉಪನಗರ ನಿರ್ಮಾಣ ಕಾಮಗಾರಿಯನ್ನು ಆಚಾರ್ಯ ವರ್ಧಮಾನ ಸಾಗರ ಮಹಾರಾಜರು ಹಾಗು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಮುನಿಗಳು ವೀಕ್ಷಿಸಿ ಕೆಲ ಮಾರ್ಪಾಡುಗಳಿಗೆ ಸಲಹೆ ಮಾಡಿದರು.

ಬೆಂಗಳೂರು ರಸ್ತೆ ಮಾರ್ಗದ ಸಮೀಪದ ಹೊಸಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಉಪನಗರಗಳ ಸ್ಥಳಕ್ಕೆ ಭೇಟಿ ನೀಡಿದ್ದರು. ಮುನಿಗಳು, ಮಾತಾಜಿಗಳು ಹಾಗು ಭಕ್ತರ ವಸತಿ ವ್ಯವಸ್ಥೆಗಾಗಿ ₹ 75 ಕೋಟಿ ವೆಚ್ಚದಲ್ಲಿ 12 ತಾತ್ಕಾಲಿಕ ಉಪ ನಗರಗಳನ್ನು ನಿರ್ಮಿಸುತ್ತಿದ್ದು, 28 ಸಾವಿರಕ್ಕೂ ಹೆಚ್ಚು ಜನ ಉಳಿಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಶಾಸಕ ಸಿ.ಎನ್‌. ಬಾಲಕೃಷ್ಣ, ಮಹಾ ಮಸ್ತಕಾಭಿಷೇಕ ಮಹೋತ್ಸವದ ವಿಶೇಷಾಧಿಕಾರಿ ಬಿ.ಎನ್‌.ವರಪ್ರಸಾದ್‌ ರೆಡ್ಡಿ, ಕೆಆರ್‌ಡಿಸಿಐಎಲ್‌ ಮುಖ್ಯ ಎಂಜಿನಿಯರ್ ಎಸ್‌.ಸಿ.ಪುಟ್ಟಸ್ವಾಮಿ, ಎಇ ಪ್ರಸನ್ನದರ್ಜೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT