ಕೆಜಿಎಫ್: ‘ಗ್ರಾಮ ವಿಕಾಸ ಯೋಜನೆಯಡಿ ಕೆಜಿಎಫ್ ವಿಧಾನಸಭಾಕ್ಷೇತ್ರದಲ್ಲಿ ನಾಲ್ಕು ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳನ್ನು ₹ 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು’ ಎಂದು ಶಾಸಕಿ ವೈ.ರಾಮಕ್ಕ ಹೇಳಿದರು. ಸಮೀಪದ ದಾಯಮಾನಗುಡಿಸಲು ಗ್ರಾಮದಲ್ಲಿ ಶನಿವಾರ ಮಾರಿಕುಪ್ಪಂ ಗ್ರಾಮ ಪಂಚಾಯಿತಿ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು.
‘ಕಳ್ಳಿಕುಪ್ಪ (ಟಿ.ಗೊಲ್ಲಹಳ್ಳಿ ಪಂಚಾಯಿತಿ), ದೊಡ್ಡಗಾನಹಳ್ಳಿ (ಜಕ್ಕರಸನಕುಪ್ಪ ಪಂಚಾಯಿತಿ), ಜೆ.ಕೆ.ಪುರಂ (ಶ್ರೀನಿವಾಸಸಂದ್ರ ಪಂಚಾಯಿತಿ) ಮತ್ತು ಮಾರಿಕುಪ್ಪಂ ಪಂಚಾಯಿತಿಯ ದಾಯಮಾನಗುಡಿಸಲು ಗ್ರಾಮವನ್ನು ಈ ಯೋಜನೆಗೆ ಅಳವಡಿಸಿಕೊಳ್ಳಲಾಗಿದೆ’ ಎಂದರು.
‘ಗ್ರಾಮ ವಿಕಾಸ ಯೋಜನೆಗೆ ಒಳಪಡುವ ಗ್ರಾಮಗಳಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿಗಳ ಪಟ್ಟಿಯನ್ನು ಸಂಬಂಧಪಟ್ಟ ಜನಪ್ರತಿನಿಧಿಗಳು ತಯಾರಿಸಿಕೊಡಬೇಕು. ಅದನ್ನು ಅನುಮೋದನೆಗೆ ಕಳಿಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ತಿಳಿಸಿದರು.
ಮುಖಂಡ ವೈ.ಸಂಪಂಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯರಾಮರೆಡ್ಡಿ, ಉಪಾಧ್ಯಕ್ಷೆ ಗೀತಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾಗ್ಯಲಕ್ಷ್ಮೀ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಬು ಶೇಷಾದ್ರಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹರೀಶ್, ಲಕ್ಷ್ಮಮ್ಮ, ಬಾಬು, ಅಬ್ದುಲ್ ಖಾದರ್ ಇದ್ದರು.