ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿಗೆ ಬೀಗ: ರೈತ ಸಂಘ ಎಚ್ಚರಿಕೆ

Last Updated 28 ನವೆಂಬರ್ 2017, 8:44 IST
ಅಕ್ಷರ ಗಾತ್ರ

ಹಾನಗಲ್‌: ‘ತಾಲ್ಲೂಕಿನ ಹಲವು ರೈತರಿಗೆ ಈತನಕ 2015–16ನೇ ಸಾಲಿನ ಮತ್ತು 16–17ನೇ ಸಾಲಿನ ಬೆಳೆವಿಮೆ ಪರಿಹಾರ ಮೊತ್ತ ಬಿಡುಗಡೆ ಆಗಿಲ್ಲ. ಪರಿಹಾರ ಹಣ ಶೀಘ್ರವೇ ರೈತರ ಖಾತೆಗೆ ಜಮೆ ಮಾಡದಿದ್ದರೆ,  ಡಿಸೆಂಬರ್ 11ರಂದು ಕೃಷಿ ಇಲಾಖೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು’ ಎಂದು ರೈತ ಸಂಘದವರು ಎಚ್ಚರಿಕೆ ನೀಡಿದ್ದಾರೆ. ತಹಶೀಲ್ದಾರ್‌ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ ರೈತರು,ಈ ಸಂಬಂಧ ಶಿರಸ್ತೇದಾರ್ ಉಮೇಶ ಸವಣೂರ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಸಂಸದರು ಒತ್ತಾಯ ಮಾಡಿ ಕೇಂದ್ರದಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳ ಬೆಳೆಸಾಲ ಮನ್ನಾ ಮಾಡಿಸಬೇಕು. 2015–16ನೇ ಸಾಲಿನ ಬೆಳೆವಿಮೆ ಪರಿಹಾರದ ಲೆಕ್ಕಾಚಾರದಲ್ಲಿ ಅಕ್ಕಿ–ಭತ್ತ ವಿಂಗಡಣೆ ವ್ಯತ್ಯಾಸದ ಹೆಚ್ಚಿನ ಪರಿಹಾರ ಮೊತ್ತ ಶೀಘ್ರ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಲಾಗಿದೆ.

ಈ ವೇಳೆ ಮಾತನಾಡಿದ ರೈತ ಸಂಘದ ಮುಖಂಡ ಮಲ್ಲೇಶಪ್ಪ ಪರಪ್ಪನವರ, ‘ಕಾರ್ಪೋರೆಟ್‌, ಉದ್ಯಮಿಗಳ ಪರವಾಗಿರುವ ಕೇಂದ್ರ ಸರ್ಕಾರ ರೈತರ ಹಿತ ಕಡೆಗಣಿಸಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ರೈತರ ಚಳವಳಿಯಲ್ಲಿ ಜಿಲ್ಲೆಯ 800 ರೈತರು ಭಾಗಿಯಾಗಿದ್ದರು. ಆದರೆ ರಾಜ್ಯದ ಸಂಸದರು ರೈತರ ಭೇಟಿಗೆ ಬರಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿದರು. ತಾಲ್ಲೂಕು ಘಟಕದ ಅಧಕ್ಷ ಮರಿಗೌಡ ಪಾಟೀಲ ಮಾತನಾಡಿ, ‘ದೇಶದ ರೈತರು ದೆಹಲಿಯಲ್ಲಿ ಸೇರಿ ಒಮ್ಮತದಿಂದ ಮಂಡಿಸಿದ ಹಕ್ಕೊತ್ತಾಯಗಳಿಗೆ ಪ್ರಧಾನಿ ಮೋದಿ ಸ್ಪಂದಿಸಲಿಲ್ಲ. ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ತಳೆದಿದೆ’ ಎಂದು ಆರೋಪಿಸಿದರು.

ರೈತ ಮುಖಂಡ ರುದ್ರಪ್ಪ ಹಣ್ಣಿ ಮಾತನಾಡಿ, ‘ಮನವಿಪತ್ರ ಸಲ್ಲಿಸಿ ಮನೆಗೆ ಹೋಗುವುದಷ್ಟೆ ರೈತರ ಕೆಲಸವಾಗಿದೆ. ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳನ್ನು ತಡೆದು ನಿಲ್ಲಿಸುವ ಸ್ಥೈರ್ಯ ಬೇಕಾಗಿದೆ’ ಎಂದರು. ವಾಸುದೇವ ಕಮಾಟಿ, ಶ್ರೀಕಾಂತ ದುಂಡಣ್ಣನವರ, ಸುರೇಂದ್ರ ಬಿದರಗಡ್ಡಿ, ಗಂಗಾಧರ ಕೊಪ್ಪದ, ಬಸನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT