ಹುಣಸಗಿ: ಸಮೀಪದ ಕಾಮನಟಗಿ ಗ್ರಾಮದ ಹನುಮಾನ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ)ಯ ಸಭೆಯಲ್ಲಿ ಗ್ರಾಮ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ರಾಜ್ಯ ಘಟಕದ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಮಾತನಾಡಿ, ‘ದಲಿತರು, ಹಿಂದುಳಿದವರು ಸೇರಿದಂತೆ ಎಲ್ಲ ಶೋಷಿತ ವರ್ಗದವರು ಶಿಕ್ಷಣ ಪಡೆದು ಸಂಘಟಿತರಾಗಬೇಕು. ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.
‘ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ಅರಿತುಕೊಂಡು ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ದಲಿತ ಸಮುದಾಯದಲ್ಲಿ ಯಾವುದೇ ರೀತಿಯ ಶೋಷಣೆ ಕಂಡರೆ ಅದರ ವಿರುದ್ಧ ಹೋರಾಟ ನಡೆಸಬೇಕು’ ಎಂದರು.
ಸಮಿತಿಯ ಹುಣಸಗಿ ತಾಲ್ಲೂಕು ಘಟಕದ ಸಂಚಾಲಕ ಜುಮ್ಮಣ್ಣ ಬಲಶೆಟ್ಟಿಹಾಳ ಮಾತನಾಡಿ, ‘ಸಮಾಜದಲ್ಲಿನ ಮೌಢ್ಯ, ಕಂದಾಚಾರ ನಿರ್ಮೂಲನೆಗಾಗಿ ಎಲ್ಲರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಸಮಿತಿಯ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಮಾಡಬೇಕು’ ಎಂದು ತಿಳಿಸಿದರು.
ಸಮಿತಿಯ ತಾಲ್ಲೂಕು ಸಂಘಟನಾ ಸಂಚಾಲಕ ರೇವಣಸಿದ್ದಪ್ಪ ಬಲಶೆಟ್ಟಿಹಾಳ, ಮುಖಂಡರಾದ ವಿಶ್ವನಾಥರೆಡ್ಡಿ ಪಾಟೀಲ, ಬಸನಗೌಡ ಕೊಡಾಗನೂರ, ಸಿದ್ದಪ್ಪ ಗುಂಡಕನಾಳ, ಧರ್ಮಣ್ಣ ಕಟ್ಟಿಮನಿ, ನಂದು ತಾಳಿಕೋಟಿ ಇದ್ದರು.
ಕಾಮನಟಗಿ ಗ್ರಾಮ ಘಟಕದ ಪದಾಧಿಕಾರಿಗಳು: ಮುತ್ತು ಚಲವಾದಿ (ಸಂಚಾಲಕ), ಗುಡದಪ್ಪ ಹವಾಲ್ದಾರ್, ಹನುಮಂತ ದಾಸರ, ಚೇತಕುಮಾರ್ ಕಟ್ಟಿಮನಿ, ನಿರುಪಾದಿ ಕುರಿ (ಸಂಘಟನಾ ಸಂಚಾಲಕರು), ಮುತ್ತು ಬಡಿಗೇರ (ಖಜಾಂಚಿ).