ಮೈಸೂರು: 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಪ್ರೊ.ಚಂದ್ರಶೇಖರ ಪಾಟೀಲ ಅವರು ಮಾಡಿದ ಭಾಷಣಕ್ಕೆ ಬಿಜೆಪಿಯು ರಾಜಕೀಯ ಬಣ್ಣ ಬಳಿದಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಕಟುವಾಗಿ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಂಗಳವಾರ ಅವರು ಮಾತನಾಡಿ, ‘ಕುಂಬಳಕಾಯಿ ಕಳ್ಳ ಎಂದಾಗ ಬಿಜೆಪಿಯವರು ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುವುದೇಕೆ? ಚಂಪಾ ಹೇಳಿಕೆಯನ್ನು ವಿರೋಧಿಸುವ ಮೂಲಕ ಕೋಮುವಾದಿ ಪಕ್ಷ ಎಂಬುದನ್ನು ಒಪ್ಪಿಕೊಂಡಿದ್ದಾರೆ’ ಎಂದರು.
ಯಾವ ಪಕ್ಷಕ್ಕೆ ನಿಜವಾಗಿಯೂ ಜಾತ್ಯತೀತತೆಯಲ್ಲಿ ಬದ್ಧತೆ ಇದೆಯೋ ಆ ಪಕ್ಷಕ್ಕೆ ಮತ ಹಾಕಿ ಎಂದು ಚಂಪಾ ಹೇಳಿದ್ದಾರೆ. ಬಿಜೆಪಿಯ ವಿರೋಧವನ್ನು ನೋಡಿದಾಗ ಅವರಿಗೆ ಜಾತ್ಯತೀತತೆಯಲ್ಲಿ ನಂಬಿಕೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿರುಗೇಟು ನೀಡಿದರು.
ನಮ್ಮದು ಜಾತ್ಯತೀತ ರಾಷ್ಟ್ರ ಎಂಬುದು ಸಂವಿಧಾನದಲ್ಲೇ ಇದೆ. ಚಂಪಾ ಕೂಡಾ ಅದನ್ನೇ ಹೇಳಿದ್ದಾರೆ. ಜಾತ್ಯತೀತ ಪಕ್ಷದ ಬದಲು ಕೋಮುವಾದಿ ಪಕ್ಷದ ಪರ ವಕಾಲತ್ತು ವಹಿಸಿ ಮಾತನಾಡಬೇಕಿತ್ತೇ ಎಂದು ಪ್ರಶ್ನಿಸಿದರು.
ಸಾಹಿತಿಗಳನ್ನು ಬಳಸಿಕೊಂಡು ರಾಜಕೀಯ ಮಾಡುವ ಅಗತ್ಯ ನಮಗೆ ಬಂದಿಲ್ಲ. ನಮ್ಮ ಸರ್ಕಾರ ಸಂವಿಧಾನದ ತತ್ವಗಳು ಮತ್ತು ಜಾತ್ಯತೀತತೆ ಮೇಲೆ ನಂಬಿಕೆಯಿಟ್ಟಿದೆ
ಎಂದರು. ಚಂಪಾ ಕುರಿತು ಸಂಸದ ಪ್ರತಾಪ್ಸಿಂಹ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.