ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಶೌಚಮುಕ್ತ ಪಟ್ಟಣದ ಕನಸು

Last Updated 29 ನವೆಂಬರ್ 2017, 5:40 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಒಂದೆಡೆ ಮುಂದಿನ ಎರಡು ತಿಂಗಳಲ್ಲಿ ಬಯಲು ಶೌಚಮುಕ್ತ ಪಟ್ಟಣ ಮಾಡುತ್ತೇವೆ ಎಂದು ಪುರಸಭೆ ಅಧಿಕಾರಿಗಳು ಶೌಚಾಲಯ ನಿರ್ಮಿಸಿಕೊಳ್ಳದ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಇನ್ನೊಂದೆಡೆ ಪುರಸಭೆ ವತಿಯಿಂದ ನಿರ್ಮಾಣ ಮಾಡಿರುವ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆಯಿಲ್ಲದೆ ಗಬ್ಬೆದ್ದು, ನಾರುತ್ತಿದ್ದು ಅಧಿಕಾರಿಗಳ ನಡೆ ನಗೆಪಾಡಲಿಗೀಡಾಗಿದೆ.

ಪಟ್ಟಣದ 18ನೇ ವಾರ್ಡ್‌ನಲ್ಲಿ ಶೌಚಾಲಯ ಸಮಚ್ಛಯ ನಿರ್ಮಾಣವಾಗಿ 5 ವರ್ಷ ಕಳೆದಿದ್ದರೂ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ. ತಿ.ನಂ.ಶ್ರೀ. ಸಾರ್ವಜನಿಕ ಗ್ರಂಥಾಲಯದ ಬಳಿ ನಿರ್ಮಿಸಿರುವ ಶೌಚಾಲಯ, ಶೆಟ್ಟಿಕೆರೆ ಗೇಟ್ ಬಳಿಯ ಆಯುಷ್ ಆಸ್ಪತ್ರೆ ಹಿಂಬದಿಯ ಸಾರ್ವಜನಿಕ ಶೌಚಾಲಯ, 23ನೇ ವಾರ್ಡ್‌ ನಾಯಕರ ಬೀದಿಯ ಸಾರ್ವಜನಿಕ ಶೌಚಾಲಯದ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ.

ವೆಂಕಟರಮಣಸ್ವಾಮಿ ದೇವಾಲಯದ ಆವರಣ, ಮಾವರದಮ್ಮನಗುಡಿ ಆಸುಪಾಸು, ಕೆರೆ ಏರಿ, ವೆಂಕಣ್ಣನ ಕಟ್ಟೆ ಉದ್ಯಾನ, ಎಪಿಎಂಸಿ ಪ್ರಾಂಗಣ, ಅಂಬೇಡ್ಕರ್ ನಗರ, ಡಿವಿಪಿ ಪ್ರೌಢಶಾಲೆ ಆಸುಪಾಸು, ಉರ್ದು ಶಾಲೆ ಆವರಣ ಹೀಗೆ ಹಲವು ಸಾರ್ವಜನಿಕ ಸ್ಥಳಗಳು ಬಯಲು ಬಹಿರ್ದೆಸೆ ತಾಣಗಳಾಗಿ ಮಾರ್ಪಟ್ಟಿವೆ. ಈ ಅವ್ಯವಸ್ಥೆಯನ್ನು ಕಣ್ಣೆತ್ತಿ ನೋಡದ ಪುರಸಭೆ ಅಧಿಕಾರಿಗಳು 2 ತಿಂಗಳಲ್ಲಿ ಪಟ್ಟಣವನ್ನು ಬಯಲು ಬಹಿರ್ದೆಸೆ ಮುಕ್ತ ಮಡುತ್ತೇವೆ ಎಂದು ಹೇಳಿಕೊಳ್ಳುತ್ತಿರುವುದು ನಗೆಪಾಟಲಿಗೆ ಕಾರಣವಾಗಿದೆ ಎಂದು 18ನೇ ವಾರ್ಡ್‌ ನಾಗರಿಕ ನಟರಾಜು ಹೇಳುತ್ತಾರೆ.

ನೆಹರೂ ಸರ್ಕಲ್, ಶೆಟ್ಟಿಕೆರೆ ಗೇಟ್, ಸಂತೆ ಮೈದಾನ, ಕೋಡುಗಲ್ಲು ರಸ್ತೆ, ಬೆಳಗಿನ ಮಾರುಕಟ್ಟೆ ಹಾಗೂ ಎಪಿಎಂಸಿ ಆವರಣದಲ್ಲಿ ಜನದಟ್ಟಣೆ ಹೆಚ್ಚು ಇದ್ದು, ದೂರದ ಹಳ್ಳಿಗಳಿಂದ ಬರುವ ಹೆಂಗಸರು, ಮಕ್ಕಳು ಸಾರ್ವಜನಿಕ ಶೌಚಾಲಯವಿಲ್ಲದೆ ಯಮ ಯಾತನೆ ಪಡುವಂತಾಗಿದೆ. ಈ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಹಾಗೂ ಇರುವ ಶೌಚಾಲಯಗಳನ್ನು ಸರಿಯಾಗಿ ನಿರ್ವಹಿಸುವಂತೆ ಒತ್ತಾಯಿಸಿದರು ಪುರಸಭೆ ಅಧಿಕಾರಿಗಳು ಕಿವುಗೊಡುತ್ತಿಲ್ಲ ಎಂಬುದು ನಗರದ ನಿವಾಸಿ ಪರಮೇಶ್ ಆರೋಪ.

* * 

ಪಟ್ಟಣದಲ್ಲಿ ಬಯಲು ಮುಕ್ತ ಶೌಚಾಲಯ ಆಂದೋಲನ ಶುರುವಾಗಿದೆ.ಎರಡುವರೆ ತಿಂಗಳಲ್ಲಿ ಎಲ್ಲ ಮನೆಗಳಲ್ಲೂ ಶೌಚಾಲಯ ನಿರ್ಮಿಸಿಕೊಳ್ಳಲು ಮನವೊಲಿಸಲಾಗುವುದು.
-ಚಂದ್ರಶೇಖರ್, ಪರಿಸರ ಎಂಜಿನಿಯರ್, ಪುರಸಭೆ ಚಿ.ನಾ.ಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT