ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುರುಳಿ ಬೆಳೆ ಉತ್ತಮ ಇಳುವರಿ

Last Updated 29 ನವೆಂಬರ್ 2017, 6:53 IST
ಅಕ್ಷರ ಗಾತ್ರ

ದೇವನಹಳ್ಳಿ: ಸತತ ನಾಲ್ಕು ವರ್ಷಗಳಿಂದ ಹಿಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟ ಪರಿಣಾಮ, ಸಂಕಷ್ಟಕ್ಕೀಡಾಗಿದ್ದ ರೈತರಿಗೆ ಈ ಬಾರಿ ಹಿಂಗಾರು ಮಳೆ ಸಕಾಲದಲ್ಲಿ ಬಂದಿದ್ದರಿಂದ ರೈತರು ಹುರುಳಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಇದ್ದಾರೆ.

ಕೃಷಿ ಇಲಾಖೆಯ ಮಾಹಿತಿಯಂತೆ ಜಿಲ್ಲೆಯ ನಾಲ್ಕು ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 821 ಹೆಕ್ಟೇರ್‌ನಲ್ಲಿ ಹುರುಳಿ ಬೆಳೆ ಬೆಳೆಯಲಾಗಿದೆ. ಹಿಂದಿನ ಸಾಲಿನಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣ ಬಾರದ್ದರಿಂದ ಪ್ರಮುಖ ಆಹಾರ ಧಾನ್ಯಗಳ ಬಿತ್ತನೆಯಲ್ಲಿ ಕುಂಠಿತವಾಗಿತ್ತು. ಹಿಂಗಾರು ಮಳೆಯಲ್ಲಿ ಹುರುಳಿ ಬಿತ್ತನೆ 1,822 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಇಳುವರಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ ಎಂಬುದು ಇಲಾಖೆಯ ಮಾಹಿತಿ.

ಪ್ರಸ್ತುತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ನೀರಾವರಿ ಮತ್ತು ಖುಷ್ಕಿ ಒಟ್ಟು 35,153 ಹೆಕ್ಟೇರ್‌ ರಾಗಿ ಫಸಲು ಭರ್ಜರಿಯಾಗಿ ಇಳುವರಿ ನಿರೀಕ್ಷೆ ಇದೆ. ಇಲಾಖೆ ಬಿತ್ತನೆ ಗುರಿ ಶೇ 91.15 ರಷ್ಟು ಮುಟ್ಟಿದ್ದು, ಶೇ 100 ರಷ್ಟು ಫಸಲು ಇಳುವರಿಯಾಗಲಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಮುಂಗಾರು ಮತ್ತು ಹಿಂಗಾರು ಎರಡೂ ಹಂಗಾಮುಗಳಲ್ಲಿ ಉತ್ತಮ ಮಳೆಯಾಗಿ ಬಿತ್ತನೆ ಮಾಡಿದ ಪ್ರತಿಯೊಂದು ಫಸಲು ಉತ್ತಮ ಇಳುವರಿಗೆ ಬಂದಿದೆ. ಸಹಜವಾಗಿ ಹುರುಳಿ ಬಿತ್ತನೆಗೆ ಅಲ್ಪ ಅವಕಾಶವಾಗಿದೆ. ಮುಂಗಾರು ಬಿತ್ತನೆ ವೈಫಲ್ಯ ಕಂಡಿದ್ದರೆ ಹಿಂಗಾರುನಲ್ಲಿ ಹೆಚ್ಚು ಹುರಳಿ ಬಿತ್ತನೆಗೆ ರೈತರು ಮುಂದಾಗುತ್ತಿದ್ದರು. ಪ್ರಸ್ತುತ ಬಿತ್ತನೆಗೆ ಅವಕಾಶವಾಗಿರುವ ಹುರಳಿ ಸಂಮೃದ್ಧವಾಗಿದ್ದು, ಇಳುವರಿಗೂ ಪೂರಕ ವಾತಾವರಣ ಇದೆ ಎಂಬುದು ಬಿದಲೂರು ಗ್ರಾಮದ ರೈತ ಮುನಿರಾಜು ವಿಶ್ಲೇಷಿಸುತ್ತಾರೆ.

ಹುರುಳಿ ಮೇವು: ಅತ್ಯಂತ ಹೆಚ್ಚು ಪೌಷ್ಟಿಕಾಂಶ ಮತ್ತು ನಾರಿನಾಂಶವಿರುವ ದ್ವಿದಳ ಧಾನ್ಯ ಹುರಳಿ, ದಿನನಿತ್ಯ ಆಹಾರ ಬಳಕೆಗೆ ಮತ್ತು ಹುರುಳಿ ಮೇವು ರಾಸುಗಳಿಗೆ ಅಷ್ಟೇ ಪೌಷ್ಟಿಕಾಂಶಯುಕ್ತ ಆಹಾರ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಮೂರು ದಿನದ ಕರುವಿಗೆ ಹಾಲು ಕೊರತೆ ಉಂಟಾದರೆ ಹುರುಳಿ ಕಾಳು ನೆನೆಸಿ ಚೆನ್ನಾಗಿ ರಸ ತೆಗೆದು ಕುಡಿಸುವುದು ರೂಢಿ. ತಳಿ ಸಂವರ್ಧನೆ ಹೋರಿ ಮತ್ತು ಕುದುರೆಗಳಿಗೆ ಪ್ರತಿನಿತ್ಯ ಹುರುಳಿ ಮೇವು ನೀಡಬೇಕು. ನಿಶ್ಶಕ್ತಿ ಹೊಂದಿದ ಇತರೆ ರೋಗ ಬಾಧಿತ ಪಶುಗಳಿಗೆ ಚೇತರಿಸಿಕೊಳ್ಳಲು ಹಾಗೂ ಹಾಲು ಇಳುವರಿಗೂ ಹುರುಳಿ ಮೇವು ಉತ್ತಮ ಎನ್ನುತ್ತಾರೆ ನಿವೃತ್ತ ಜಿಲ್ಲಾ ಪಶುವೈದ್ಯಕೀಯ ಇಲಾಖೆ ನಿರ್ದೇಶಕ ಮುನಿವೆಂಕಟಪ್ಪ.

ಕೂಲಿ ದುಪ್ಪಟ್ಟು, ರೈತರ ಪರದಾಟ: ರಾಗಿ ಬೆಳೆ ಪ್ರಸ್ತುತ ಶೇ 80 ರಷ್ಟು ಕೊಯಿಲಿಗೆ ಬಂದು ನಿಂತಿದೆ. ಕೃಷಿ ಕೂಲಿ ಕಾರ್ಮಿಕರ ಕೊರತೆ ಜತೆಗೆ ಕೂಲಿ ಬೆಲೆ ದುಪ್ಪಟ್ಟು ಇದೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ ಮತ್ತು ಇತರೆ ಖರ್ಚು ಸೇರಿ ಪ್ರತಿ ಕೂಲಿ ಕಾರ್ಮಿಕರಿಗೆ ದಿನವೊಂದಕ್ಕೆ ₹ 450 ರಿಂದ 500 ನೀಡಬೇಕು. ಪ್ರತಿ ಎಕರೆ ಕೊಯ್ಲು ಗುತ್ತಿಗೆಗೆ 6,000– 8,000 ನೀಡಲೇಬೇಕು ಎಂಬುದು ಸಾವಕನಹಳ್ಳಿ ಗ್ರಾಮದ ರೈತ ಎಸ್‌.ಸಿ.ಗೋಪಾಲಸ್ವಾಮಿ ಪ್ರತಿಕ್ರಿಯೆ.

ನಾಲ್ಕು ವರ್ಷಗಳಿಂದ ಇಂತಹದ ಸಮೃದ್ಧ ಗಟ್ಟಿ ಕಾಳು ಸಹಿತ ತೆನೆ ಕಟ್ಟಿರಲಿಲ್ಲ. ಕೊಯ್ಲಿಗೆ ಹೆಚ್ಚು ಕೂಲಿ ಎಂದು ಹಿಂದು ಮುಂದು ನೋಡುವ ಸಂದರ್ಭ ಇದಲ್ಲ ಕೊಯ್ಲು ಮಾಡಿ ಒಣಗಿದ ನಂತರ ಬಣವೆ ಮಾಡಿ ಕೆಲವಾರಗಳ ನಂತರ ಒಕ್ಕಣೆಗೆ ಹಾಕಬೇಕು. ‘ಬೇಸಾಯ ಎಂದರೆ ಮನೆಮಂದಿ ಸಾಯ ಆಗಿದೆ ನಮ್ಮ ಸ್ಥಿತಿ’ ಎನ್ನುತ್ತಾರೆ ಆಲೂರು ಗ್ರಾಮದ ರೈತ ಪಟಾಲಪ್ಪ.

ನಿರೀಕ್ಷೆಗಿಂತ ಹೆಚ್ಚು ಇಳುವರಿ
ಜಿಲ್ಲೆಯಲ್ಲಿ ಒಟ್ಟಾರೆ ಬಿತ್ತನೆ 49,395.6 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿರುವ ವಿವಿಧ ಎಲ್ಲಾ ಬೆಳೆಗಳು ಶೇಕಡವಾರು ನಿರೀಕ್ಷೆಗಿಂತ ಹೆಚ್ಚು ಇಳುವರಿಯಾಗಲಿದೆ. ಮುಂಗಾರಿನಲ್ಲಿ ಬಿತ್ತನೆಯಾಗಿ, ಹಿಂಗಾರಿನಲ್ಲಿ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿಸುವ ಅವರೆ ಬೆಳೆ 1,561 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಎನ್ ಮಂಜುಳಾ.

ಕಳೆದ ಸಾಲಿನಲ್ಲಿ 2,180 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಗಿತ್ತು. ದ್ವಿದಳ ಧಾನ್ಯಗಳಾದ ತೊಗರಿ, ಹೆಸರು, ಅಲಸಂದಿ ಮತ್ತು ಎಣ್ಣೆಕಾಳು ಧಾನ್ಯಗಳು ಉತ್ತಮ ಇಳುವರಿಯಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT