ಹಾಸನ: ‘ಪದ್ಮಾವತಿ’ ಚಿತ್ರ ವೀಕ್ಷಣೆ ಮಾಡದೆ ವಿರೋಧಿಸುವುದು ಮತ್ತು ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಚಲನಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ಹೇಳಿದರು. ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ‘ಚಿತ್ರದಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಅನ್ಯಾಯ ಮತ್ತು ಅವಮಾನವಾಗಿದೆ ಎಂಬ ಆರೋಪ ಸಲ್ಲದು. ಪುಸ್ತಕ ಓದದೆ, ಚಿತ್ರ ವೀಕ್ಷಣೆ ಮಾಡದೆ ಈ ರೀತಿ ವರ್ತಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು. ನಾನು ಸಹ ಚಿತ್ರ ವೀಕ್ಷಿಸಿಲ್ಲ. ಯಾರೂ ಚಿತ್ರ ನೋಡದಿದ್ದರೂ ಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.