ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ತಕಾಭಿಷೇಕ ಕಾಮಗಾರಿ ಚುರುಕುಗೊಳಿಸಿ

Last Updated 29 ನವೆಂಬರ್ 2017, 9:05 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಕುರಿತು ಶಾಸಕ ಸಿ.ಎನ್. ಬಾಲಕೃಷ್ಣ ಮಂಗಳವಾರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಮಹೋತ್ಸವಕ್ಕೆ ದಿನಗಣನೆ ಆರಂಭಗೊಂಡಿದೆ. ವಿದ್ಯುತ್‌ ಸಂಪರ್ಕ, ರಸ್ತೆ ಕಾಮಗಾರಿ, ನೀರಿನ ವ್ಯವಸ್ಥೆ ಮತ್ತು 12 ಉಪ ನಗರಗಳ ನಿರ್ಮಾಣ ಕಾಮಗಾರಿಗಳು ಚುರುಕುಗೊಳಿಸಬೇಕು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಸ್‌ ನಿಲ್ದಾಣ, ಜನದಟ್ಟಣೆ ಹೆಚ್ಚು ಇರುವ ಪ್ರದೇಶ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶಿಸಿದರು. ಕೋಳಿ ಹಾಗೂ ಮಾಂಸದಂಗಡಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಸ್ವಚ್ಛತೆಗೆ ಒತ್ತು ನೀಡುವಂತೆ ತಿಳಿಸಿದರು.

ರಾಜ್ಯ ರಸ್ತೆ ಸಾರಿಗೆ ನಿಗಮವು ಮಹೋತ್ಸವದ ಸಂದರ್ಭದಲ್ಲಿ ರಾಜ್ಯದ ಹೊರಭಾಗದಿಂದ ಶ್ರವಣಬೆಳಗೊಳಕ್ಕೆ 175 ಬಸ್‌ಗಳ ಸೌಲಭ್ಯ ಒದಗಿಸಲಿದೆ. ಅಲ್ಲದೇ ಪಟ್ಟಣದ ಒಳ ಭಾಗದಲ್ಲಿ ಹೊಸದಾಗಿ 25 ಮಿನಿ ಬಸ್‌ ಸೇವೆ ನೀಡುತ್ತಿದೆ. ಈಗಾಗಲೇ ನಿರ್ಮಾಣಗೊಳ್ಳುತ್ತಿರುವ ಬಸ್‌ ನಿಲ್ದಾಣ ವಿಸ್ತರಣಾ ಕಟ್ಟಡದಲ್ಲಿ 11 ಡಾರ್ಮೆಟರಿ ಹಾಲ್‌ಗಳನ್ನು ಒದಗಿಸಲಾಗುವುದು ಎಂದು ಕೆಎಸ್ಆರ್‌ಟಿಸಿ ಘಟಕದ ವ್ಯವಸ್ಥಾಪಕ ಪಿ.ಬಿ.ನಾಗರಾಜಪ್ಪ ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯು ₹ 50 ಲಕ್ಷ ವೆಚ್ಚದಲ್ಲಿ ಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದೆ. ಪಟ್ಟಣ ಸಂಪರ್ಕಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡುವ ಬಗ್ಗೆ ಸ್ಥಳ ಅಂತಿಮಗೊಳ್ಳಬೇಕಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್‌ ವಿವರಿಸಿದರು.

ಉಪ ನಗರಗಳಿಗೆ ವಿದ್ಯುತ್‌ ಒದಗಿಸಲು 55 ಪರಿವರ್ತಕ ಮತ್ತು ವಿದ್ಯುತ್‌ ಕಂಬಗಳನ್ನು ಅಳವಡಿಸಲಾಗುವುದು. ಚರಂಡಿ ಮತ್ತು ರಸ್ತೆ ಮಾರ್ಗ ಗುರುತಿಸಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಚಾಮುಂಡೇಶ್ವರಿ ವಿದ್ಯುತ್‌ ನಿಗಮದ ಅಧೀಕ್ಷಕ ಎಂಜಿನಿಯರ್‌ ಸುಚೇತನ್‌ ಉತ್ತರಿಸಿದರು.

ಸಹಾಯಕ ಎಂಜಿನಿಯರ್‌ ಜಗದೀಶ್‌, ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ನೆಲ ಮಟ್ಟದ ಜಲ ಸಂಗ್ರಹಗಾರದ 2.5 ಲಕ್ಷ ಲೀಟರ್‌ ಸಾಮರ್ಥ್ಯದ ಜೊತೆಗೆ ಪಂಪು ಮನೆ ನಿರ್ಮಾಣ ಹಾಗೂ 5 ಲಕ್ಷ ಲೀಟರ್‌ ಸಾಮರ್ಥ್ಯದ ಜಲ ಸಂಗ್ರಹಗಾರದ ಕಾಮಗಾರಿಗಳು ಶೇ 90 ರಷ್ಟು ಮುಗಿದಿದ್ದು, ಶಿಥಿಲಗೊಂಡಿದ್ದ ನೀರು ಸರಬರಾಜು ಮಾಡುವ ಹಳೆಯ ಪೈಪ್‌ಗಳನ್ನು ಬದಲಾಯಿಸುವ ಕೆಲಸ ಮುಗಿದಿದೆ ಎಂದರು.

ಗ್ರಾಮ ಪಂಚಾಯಿತಿ ಪಿಡಿಒ ನವೀನ್‌ ಕುಮಾರ್‌ ಮಾತನಾಡಿ, ಪಟ್ಟಣದ ತ್ಯಾಜ್ಯ ವಿಲೇವಾರಿ ಮಾಡಲು 5 ಎಕರೆ ಸ್ಥಳವನ್ನು ಸರ್ವೆ ಮಾಡಿ ಗುರುತಿಸಲಾಗಿದೆ. ಕಸ ವಿಲೇವಾರಿಗೆ ಅಗತ್ಯ ವಾಹನಗಳು ಇಲ್ಲದೇ ಇರುವ ಕಾರಣ ತೊಂದರೆಯಾಗುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಅಗತ್ಯ ವಾಹಗಳ ಸಂಖ್ಯೆ ಮತ್ತು ಅಂದಾಜು ವೆಚ್ಚದ ಪಟ್ಟಿಯನ್ನು ಸಲ್ಲಿಸಲು ಸೂಚಿಸಿದರು.

ಉಪಾಧ್ಯಕ್ಷ ಎಸ್‌.ಎನ್‌.ರವಿ ಮಾತನಾಡಿ, ಪಟ್ಟಣದ ಒಳಗಡೆಯ ರಸ್ತೆಯ ಡಾಂಬರೀಕರಣ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಗ್ರಾಮ ಪಂಚಾಯಿತಿಗೆ ಅನುದಾನ ನಿಗದಿ ಪಡಿಸಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್‌ ಕೆ.ಆರ್‌.ಡಿ.ಸಿ.ಎ.ಎಲ್‌. ಕಿರಿಯ ಎಂಜಿನಿಯರ್‌ ಪ್ರಸನ್ನದರ್ಜೆ, ಜಿಲ್ಲಾ ಪಂಚಾಯಿತಿಯ ವಿಜಯಕುಮಾರ್‌, ಹೆದ್ದಾರಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್‌ ರಮೇಶ್‌, ಆರಕ್ಷಕ ಉಪ ನಿರೀಕ್ಷಕ ತಿಮ್ಮಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT