ಹೆಬ್ಬೂರು: ಲೈಂಗಿಕ ಕ್ರಿಯೆಗೆ ಒಪ್ಪದ ಮಹಿಳೆಯನ್ನು ದೊಣ್ಣೆಯಿಂದ ಕೊಲೆ ಮಾಡಿ ಶೌಚಗುಂಡಿಯಲ್ಲಿ ಹೂತ್ತಿಟ್ಟ ಪ್ರಕರಣ ಬುಧವಾರ ಬೆಳಕಿಗೆ ಬಂದಿದೆ.
ಹೋಬಳಿಯ ಹೊನ್ನುಡಿಕೆಯ ಎ.ಕೆ.ಕಾವಲ್ನಲ್ಲಿ ರಾಜಮ್ಮ ಕೊಲೆಯಾದವರು. ಮೇಸ್ತ್ರಿ ಕೆಲಸ ಮಾಡುವ ಇದೇ ಗ್ರಾಮದ ಹನುಮಂತೇಗೌಡ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಆದರೆ ಯಾವುದೋ ಕಾರಣದಿಂದ ಇವರಿಬ್ಬರ ನಡುವೆ ಮನಸ್ತಾಪವಾಗಿತ್ತು. ಇದರಿಂದ ಇಬ್ಬರು ದೂರು ಉಳಿದಿದ್ದರು ಎಂದು ಹೇಳಲಾಗಿದೆ.
‘ರಾಜಮ್ಮ ಅವರನ್ನು ಈಚೆಗೆ ಉಪಾಯ ಮಾಡಿ ಕರೆಸಿಕೊಂಡು ಲೈಂಗಿಕ ಕ್ರಿಯೆಗೆ ಯತ್ನಿಸಿದೆ. ಆಕೆ ಒಪ್ಪದೇ ಇದ್ದಾಗ ದೊಣ್ಣೆಯಿಂದ ಹೊಡೆದಾಗ ಸಾವಿಗೀಡಾದಳು. ಶವವನ್ನು ಮನೆಯ ಹಿಂಭಾದಲ್ಲಿರುವ ಶೌಚಾಲಯ ಗುಂಡಿಯಲ್ಲಿ ಮುಚ್ಚಿದ್ದಾಗಿ ವಿಚಾರಣೆ ವೇಳೆ ಆರೋಪಿ ಹನುಮಂತೇಗೌಡ ತಿಳಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
ತಾಲ್ಲೂಕಿನ ಹೊನ್ನುಡಿಕೆ ಸಮೀಪ ಎ.ಕೆ ಕಾವಲ್ ನಲ್ಲಿ ರಾಜಮ್ಮ ಎಂಬ ಮಹಿಳೆ ಕೊಲೆ ಮಾಡಿ ಶೌಚ ಗುಂಡಿಯಲ್ಲಿ ಮುಚ್ಚಿಹಾಕಿದ್ದ ಶವದ ಪರೀಕ್ಷೆಯನ್ನು ಬುಧವಾರ ತಹಶೀಲ್ದಾರ್ ರಂಗೇಗೌಡ, ಸಿಪಿಐ ರಾಧಾಕೃಷ್ಣ ಸಮ್ಮುಖದಲ್ಲಿ ಮಾಡಲಾಯಿತು.
ರಾಜಮ್ಮ ಅವರು ಕಾಣೆಯಾಗಿದ್ದಾರೆ ಎಂದು ಅವರ ಸಹೋದರಿ ದೂರು ನೀಡಿದ್ದರು. ದೂರು ಆಧರಿಸಿ ತನಿಖೆ ನಡೆಸಿದ ಹೆಬ್ಬೂರು ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೆಬ್ಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.