ಕುಂದಗೋಳ: ಅರಣ್ಯ ಇಲಾಖೆ ಸಸಿ ನೆಡುವಿಕೆಯಲ್ಲಿ ಅವ್ಯವಹಾರ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಉಪ
ಲೋಕಾಯುಕ್ತ ಜಿ. ಆನಂದ್ ಸ್ವಯಂ ಆಗಿ ದೂರು ದಾಖಲಿಸಿಕೊಂಡಿದ್ದಾರೆ. ಜತೆಗೆ ತಾಲ್ಲೂಕು ಪಂಚಾಯ್ತಿ ಸದಸ್ಯರೊಬ್ಬರೂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಾಖಲೆಗಳಲ್ಲಿ ತೋರಿಸುವಷ್ಟು ಸಸಿಗಳನ್ನು ನೆಟ್ಟಿಲ್ಲ. ಸಸಿಗಳಿಗಾಗಿ ₹2.23 ಲಕ್ಷ ಖರ್ಚು ಮಾಡಿದ್ದರೆ, ಸಸಿಗಳ ನಿರ್ವಹಣೆಗಾಗಿ ₹7.000 ಖರ್ಚು ಮಾಡಲಾಗಿದೆ. ಆದರೆ, ಅಷ್ಟು ಸಸಿಗಳು ಕಂಡು ಬರಲಿಲ್ಲ. ಅರಣ್ಯ ಇಲಾಖೆ ಎಂದು ಸ್ಥಳ ಪರಿಶೀಲನೆ ನಂತರ ಉಪಲೋಕಾಯುಕ್ತ ಜಿ. ಆನಂದ್ ಸುದ್ದಿಗಾರರಿಗೆ ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಸಾಮಾನ್ಯಸಭೆಯಲ್ಲಿ ಅರಣ್ಯ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ನಿರ್ಣಯಿಸಿದ್ದರೂ ಕ್ರಮ ತೆಗೆದುಕೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸಿರುವ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಸ್. ಮೇಟಿ ಅವರ ವಿರುದ್ಧವೂ ಕ್ರಮಕಯಗೊಲ್ಳಲಾಗುವುದು. ಜೊತೆಗೆ ಟೆಂಡರ್ ಕರೇಯದೇ ಎರಡು ವಾಹನಗಳನ್ನು ಬಾಡಿಗೆ ಪಡೆದಿರುವ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.
ಸಾಮಾಜಿಕ ಅರಣ್ಯ ಇಲಾಖೆಯಿಂದ ಕಳೆದ ಎರಡು ವರ್ಷಗಳಲ್ಲಿ ವಿವಿಧ ರಸ್ತೆಗಳ ಬದಿಗಳಲ್ಲಿ ಸಸಿ ನೆಡಲಾಗಿದೆಯೇ ಎಂಬುದನ್ನು 15 ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಬೇಕು ಎಂದು ಡಿವೈಎಸ್ಪಿ ಶಂಕರ ರಾಗಿ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ವೆಂಕನಗೌಡ ಕಂಠೆಪ್ಪಗೌಡ್ರ ಅವರೂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಬಸನಗೌಡ ಕರೆಹೊಳಲಪ್ಪಗೌಡ್ರ, ಗುರುಸಿದ್ದಗೌಡ ಮೇಲ್ಮಾಳಗಿ, ವೀರಬದ್ರಪ್ಪ ಕಲಹಾಳ, ಅಶೋಕ ಮೈಸೂರ ಇದ್ದರು.