ಸಿಂಧನೂರು: ಬಾಕಿಯುಳಿದಿರುವ ಐದು ತಿಂಗಳ ವೇತನವನ್ನು ಹಂಗಾಮಿ ಕಾರ್ಮಿಕರಿಗೆ ಶೀಘ್ರವೇ ಪಾವತಿಸಬೇಕು ಎಂದು ಒತ್ತಾಯಿಸಿ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ತಾಲ್ಲೂಕು ಘಟಕವು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಗುರುವಾರ ಮೂರನೇ ದಿನಕ್ಕೆ ಕಾಲಿರಿಸಿತು.
ಘಟಕದ ಅಧ್ಯಕ್ಷ ವಾದಿರಾಜ ಮಾತನಾಡಿ, ‘ಸಿರವಾರ, ಯರಮರಸ್, ಸಿಂಧನೂರು, ಜವಳಗೇರಾ, ಮಸ್ಕಿ ಹಾಗೂ ತುರ್ವಿಹಾಳ ವಿಭಾಗಗಳಲ್ಲಿನ 827 ಕಾರ್ಮಿಕರಿಗೆ ಐದು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಕುಟುಂಬ ನಿರ್ವಹಿಸಲು ಮತ್ತು ಮಕ್ಕಳಿಗೆ ಶಿಕ್ಷಣ ಕೊಡಿಸಲು ತೊಂದರೆಯಾಗುತ್ತಿದೆ’ ಎಂದರು.
‘ಕನಿಷ್ಠ ವೇತನ ಕಾಯ್ದೆ ಮತ್ತು ವೇತನ ಕಾಯ್ದೆ ಪ್ರಕಾರ, ಸರ್ಕಾರವು ಅಧಿಸೂಚಿತ ದರದಲ್ಲಿ ವೇತನ, ಬಾಕಿ ವೇತನ ಮತ್ತು ಇತರೆ ಸೌಲಭ್ಯ ಕಾರ್ಮಿಕರಿಗೆ ದೊರೆಯಬೇಕು. ಆದರೆ ಅವರಿಗೆ ಸಿಗುತ್ತಿಲ್ಲ. ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ. ಶೋಷಣೆ ಮುಂದುವರೆದಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಆರ್ವೈಎಫ್ಐ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ಗಂಗಾಧರ್ ಮಾತನಾಡಿ, ‘ವೇತನ ಕೊಡಿಸುವುದಾಗಿ ಜಿಲ್ಲಾಧಿಕಾರಿ ಗೌತಮ ಬಗಾದಿ ಮತ್ತು ತಹಶೀಲ್ದಾರ್ ವೆಂಕನಗೌಡ ಆರ್.ಪಾಟೀಲ ಭರವಸೆ ನೀಡಿದ್ದಾರೆ. ಆದರೆ ಮುನಿರಾಬಾದ್ನ ಮುಖ್ಯ ಕಾರ್ಯನಿರ್ವಾಹಕ ಎಂಜನಿಯರ್ ಸದ್ಯ ಎರಡು ತಿಂಗಳ ವೇತನ ಮಾತ್ರ ನೀಡಲಾಗುವುದು, ನಂತರ ದಿನಗಳಲ್ಲಿ ಉಳಿದ ವೇತನ ಪಾವತಿಸಲಾಗುವುದೆಂದು ಹೇಳುತ್ತಿದ್ದಾರೆ. ಕಾರ್ಮಿಕರ ಸಮಸ್ಯೆ ಮಾತ್ರ ಪರಿಹಾರ ಆಗುತ್ತಿಲ್ಲ’ ಎಂದರು.
‘ಕಾರ್ಮಿಕರ ಬಾಕಿ ವೇತನ ಪಾವತಿ ಆಗುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತೋರುವುದನ್ನು ಮುಂದುವ ರಿಸಿದ್ದಲ್ಲಿ, ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ರಾಜ್ಯಾದ್ಯಂತ ಹೋರಾಟ ವಿಸ್ತರಿಸಲಾಗುವುದು’ ಎಂದರು. ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಅವರು ಗುರುವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿದರು. ತುರ್ವಿಹಾಳ ಘಟಕದ ಅಧ್ಯಕ್ಷ ಆದಪ್ಪ, ಮುಖಂಡರಾದ ಬಸಪ್ಪ ಜವಳಗೇರಾ, ಹನುಮಂತಪ್ಪ ಬೂದಿಹಾಳ, ಮಹ್ಮದ್ ಮಸ್ಕಿ, ರಾಮಪ್ಪ ತುರ್ವಿಹಾಳ, ಶರಣಪ್ಪ, ಬೆಟ್ಟಪ್ಪ ಜವಳಗೇರಾ, ಚಾಂದಪಾಷಾ ಬಳಗಾನೂರು, ಜಗನ್ನಾಥ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.