ಉಪ್ಪಿನಂಗಡಿ: ಮುಹಮ್ಮದ್ ಪೈಗಂ ಬರರ ಜನ್ಮ ದಿನಾಚರಣೆ ಈದ್-ಮಿಲಾದ್ ಸಮಾರಂಭ ಶುಕ್ರವಾರ ಜರಗಿತು. ಮದ್ರಸ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ಸಲಾಂ ಫೈಝಿ ಉದ್ಘಾಟಿಸಿದರು.
‘ನೆಬಿಯವರು ಏಕತೆ, ಸಹೋದರತೆ, ಸೌಹಾರ್ದತೆಯನ್ನು ಪ್ರತಿಪಾದಿಸಿದ್ದು, ನಾವು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡುಮುನ್ನಡೆಯಬೇಕು’ ಎಂದರು. ಉಪ್ಪಿನಂಗಡಿ ಕೇಂದ್ರ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಅಧ್ಯಕ್ಷತೆ ವಹಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಆಕರ್ಷಕ ಮೆರವಣಿಗೆ: ಶುಕ್ರವಾರ ಮಸೀದಿಯಲ್ಲಿ ಧ್ವಜಾರೋಹಣ ನಡೆಸಲಾಗಿ ಬಳಿಕ ಕೂಟೇಲು ದರ್ಗಾ ಬಳಿಯಲ್ಲಿ ಜಮಾಯಿಸಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಬಳಿಕ ಅಲ್ಲಿಂದ ಆಕರ್ಷಕ ಮೆರವಣಿಗೆ ನಡೆಯಿತು. ಮೆರವಣಿಗೆ ಹೆದ್ದಾರಿಯಲ್ಲಿ ಸಾಗಿ,ಬ್ಯಾಂಕ್ ರಸ್ತೆ ಮೂಲಕ ಮಸೀದಿಗೆ ಬರಲಾಯಿತು.
ಸಮಾರಂಭದಲ್ಲಿ ಮದ್ರಸದ ಅಶ್ರಫ್ ಹನೀಫಿ, ಹೈದರ್ ಸಹದಿ, ಅಬ್ದುಲ್ ಅಜೀಜ್ ಫೈಝಿ, ಅಬ್ದುಲ್ಲ ಮುಸ್ಲಿಯಾರ್, ಮಸೀದಿ ಪದಾಧಿಕಾರಿಗಳಾದ ಹಾರೂನ್ ರಶೀದ್, ಶುಕೂರ್ ಹಾಜಿ, ಮುಸ್ತಫಾ, ಕಡವಿನಬಾಗಿಲು ಮದ್ರಸದ ಅಧ್ಯಕ್ಷ ಮಹಮ್ಮದ್ ಹಾಜಿ, ಯು.ಟಿ. ತೌಶೀಫ್, ಸಿದ್ದಿಕ್ ಕೆಂಪಿ, ಶಬ್ಬೀರ್ ಕೆಂಪಿ, ಇಬ್ರಾಹಿಂ ಆಚಿ ಇದ್ದರು.
ಹಣ್ಣು ವಿತರಣೆ: ಈದ್ ಮಿಲಾದ್ ಹಬ್ಬದ ಸಲುವಾಗಿ ಯು. ಎಸ್. ಪ್ರೂಟ್ಸ್ ಮಾóಲಕ ಉಮ್ಮರ್ ಹಣ್ಣು ಹಂಪಲು ವಿತರಿಸಿದರು. ಬಚ್ಚಂಗಾಯಿ, ಸೇಬು, ದ್ರಾಕ್ಷಿ, ಕಿತ್ತಾಳೆ ಮೊದಲಾದ ಹಣ್ಣುಗಳನ್ನು ಸಾವಿರಾರು ಜನರಿಗೆ ಉಚಿತವಾಗಿ ವಿತರಿಸಿ ಹಬ್ಬವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಿದರು.
ಸತ್ಕರ್ಮದ ಜೀವನ ಇರಲಿ: ತಂಙಳ್ಉಪ್ಪಿನಂಗಡಿ: ಸತ್ಕರ್ಮದ ಜೀವನ ನಡೆಸುವುದರೊಂದಿಗೆ ಐಕ್ಯತೆ, ಸೌಹಾರ್ದತೆಗೆ ಒತ್ತು ಕೊಡಬೇಕು ಎನ್ನುವುದು ಪ್ರವಾದಿಯವರ ಸಂದೇಶ ಆಗಿರುತ್ತದೆ, ಅವರ ಸಂದೇಶ ಪಾಲನೆ ಆದರೆ ಮಾತ್ರ ನೆಬಿ ದಿನ ಆಚರಣೆ ಸಾರ್ಥಕ ಆಗಲು ಸಾಧ್ಯ ಅದರ ಹೊರತಾದ ತೋರ್ಪಡಿಕೆಯ ಆಡಂಬರ ಸಲ್ಲದು ಎಂದು ಗಂಡಿಬಾಗಿಲು ಮಸೀದಿ ಖತೀಬ್ ಅನಸ್ ತಂಙಳ್ ಹೇಳಿದರು.
ಶುಕ್ರವಾರ ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯಲ್ಲಿ ನುಜೂಮುಲ್ ಇಸ್ಲಾಂ ಯಂಗ್ಮೆನ್ಸ್ ವತಿಯಿಂದ ಹಮ್ಮಿಕೊಳ್ಳಲಾದ ಈದ್-ಮಿಲಾದ್ ಸಮಾರಂಭದ ಅಧ್ಯಕ್ಷತೆ ವಹಿಸಿ, ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.
ಗಂಡಿಬಾಗಿಲುನಿಂದ ಹೊರಟ ಮಿಲಾದ್ ಮೆರವಣಿಗೆ ಕೊಯಿಲ, ನೀರಾಜೆ ಮದ್ರಸವರೆಗೆ ನಡೆಯಿತು. ದಫ್ ಸಂಘದ ವತಿಯಿಂದ ಆಕರ್ಷಕ ದಫ್ ಪ್ರದರ್ಶನ ನೀಡಿದರು. ಗುರುವಾರ ರಾತ್ರಿ ಮದ್ರಸ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿ ಬಹುಮಾನ ವಿತರಿಸಲಾಯಿತು. ಅನಸ್ ತಂಙಳ್ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಿತು.
ಮಸೀದಿ ಸಮಿತಿ ಪದಾಧಿಕಾ ರಿಗಳಾದ ಎಸ್. ಆದಂ ಹಾಜಿ, ಜಿ. ಯೂಸುಫ್ ಹಾಜಿ, ಆದಂ, ಜಿ. ಮಹಮ್ಮದ್ ರಫೀಕ್, ಅಬ್ದುಲ್ ರಜಾಕ್ ಮರ್ವೇಲ್, ಯಂಗ್ಮೆನ್ಸ್ ಅಧ್ಯಕ್ಷ ಅಬ್ದುಲ್ ರಹಿಮಾನ್, ಸದರ್ ಮುಅಲ್ಲಿಂ ಅಬ್ದುಲ್ ರಹಿಮಾನ್ ಅರ್ಶದಿ, ರಫೀಕ್ ಮುಸ್ಲಿಯಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.