ರೋಣ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾತೃಪೂರ್ಣ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಗುರುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ದುಂಡಮ್ಮ ಬಳಿಗಾರ ಸರ್ಕಾರ ಜಾರಿಗೊಳಿಸಿರುವ ಮಾತೃಪೂರ್ಣ ಯೋಜನೆ ಯಶಸ್ವಿ ಆಗಬೇಕಾದರೆ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಸದ್ಯ ತಾಲ್ಲೂಕಿನ ಶೇ 40ರಷ್ಟು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲ.
ಕಾರ್ಯಕರ್ತೆಯರು ಹಾಗೂ ಅಡುಗೆ ಸಹಾಯಕಿಯರ ಕೊರತೆ ಕಾಡುತ್ತಿದೆ. ಕುಡಿಯುವ ನೀರು, ಅಡುಗೆ ಅನಿಲ, ಅಡುಗೆ ಸಿದ್ಧಪಡಿಸುವ ಉಪಕರಣಗಳ ಲಭ್ಯತೆಯೂ ಅಷ್ಟಕ್ಕಷ್ಟೇ. ಇದರಿಂದ ನಿತ್ಯ ಸಹಾಯಕಿಯರು ಮತ್ತು ಕಾರ್ಯಕರ್ತೆಯರು ಸಮಸ್ಯೆ ಎದುರಿಸುತ್ತಿದ್ದಾರೆ.
ಅಂಗನವಾಡಿ ಕೇಂದ್ರಗಳ ಆರ್ಥಿಕ ವೆಚ್ಚ ನಿರ್ವಹಣೆಗೆ ಬಾಲವಿಕಾಸ ಸಮಿತಿ ಅಧ್ಯಕ್ಷರ ಜತೆ ಜಂಟಿ ಖಾತೆ ತೆರೆಯುವ ಕ್ರಮ ಸರಿಯಲ್ಲ. ಇಂಥ ಅವೈಜ್ಞಾನಿಕ ಕ್ರಮಗಳನ್ನು ನಿಲ್ಲಿಸಬೇಕು ಎಂದು ಹೇಳಿದರು.