ಹುಬ್ಬಳ್ಳಿ: 'ಆರ್ಎಸ್ಎಸ್, ಸಂಘ ಪರಿವಾರ, ಬಿಜೆಪಿ ಎಂದರೆ ಕೇವಲ ಕೋಮುವಾದಿ ಶಕ್ತಿಗಳು ಎಂದು ದೂರುವ ಎಡಬಿಡಂಗಿಗಳು ಬಂದು ಇಲ್ಲಿ ನಡೆಯುತ್ತಿರುವ ಸೇವಾ ಸಂಗಮ ನೋಡಲಿ' ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದರು.
ನಗರದಲ್ಲಿ ನಡೆಯುತ್ತಿರುವ ಸೇವಾ ಸಂಗಮ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಮಾಧ್ಯಮಗಳಲ್ಲಿ ಏಕಮುಖ ಚಿತ್ರಣ ನೀಡಲಾಗುತ್ತಿದೆ. ರಾಷ್ಟ್ರೀಯ ಸೇವಾ ಭಾರತಿ ಏನು ಕೆಲಸ ಮಾಡಿದೆ ಎಂಬುದು ಇಲ್ಲಿಗೆ ಬಂದು ಪ್ರದರ್ಶನ ವೀಕ್ಷಿಸಿದರೆ ತಿಳಿಯುತ್ತದೆ' ಎಂದರು.
'ಸಂಘ ಪರಿವಾರದಂತಹ ಸಾವಿರಾರು ಸಂಘಟನೆಗಳು ಕಳೆದ ದಶಕದಲ್ಲಿ ಕೈಗೊಂಡ ಸೇವಾ ಚಟುವಟಿಕೆಗಳ ಚಿತ್ರಣ ಸೇವಾ ಸಂಗಮದಲ್ಲಿ ಸಿಗುತ್ತಿದೆ. ಈ ಸಂಘಟನೆಗಳು ತನು, ಮನ, ಧನ ಅರ್ಪಿಸಿ, ದೇಶದಾದ್ಯಂತ ಇಂತಹ ಸೇವೆ ಮಾಡುತ್ತಿವೆ' ಎಂದು ಅನಂತ ಕುಮಾರ್ ಹೇಳಿದರು.