ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಹಂಗಾಮು: ಶೇ 94ರಷ್ಟು ಬಿತ್ತನೆ

Last Updated 2 ಡಿಸೆಂಬರ್ 2017, 9:28 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಇದುವರೆಗೆ ಶೇ 94ರಷ್ಟು ಪೂರ್ಣಗೊಂಡಿದೆ. ಹಂಗಾಮಿನ ಆರಂಭದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ, ಜಮೀನಿನಲ್ಲಿ ನೀರು ನಿಂತು, ತೇವಾಂಶದಿಂದ ಬಿತ್ತನೆ ಕಾರ್ಯ ನಿಧಾನವಾಗಿ ಆರಂಭವಾಗಿತ್ತು. ಮುಂಗಾರಿನಲ್ಲಿ ಮಳೆ ಕೊರತೆಯಿಂದ ನಂತರ ಅತಿವೃಷ್ಟಿಯಿಂದ ಬೆಳೆ ಹಾನಿ ಅನುಭವಿಸಿದ್ದ ರೈತರಿಗೆ ಹಿಂಗಾರು ಬೆಳೆಗಳು ಕೈ ಹಿಡಿಯುವ ಲಕ್ಷಣಗಳು ಕಾಣಿಸುತ್ತಿವೆ.

ಪ್ರಸಕ್ತ ಹಿಂಗಾರಿನಲ್ಲಿ ಒಟ್ಟು 2.63 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಅದರಲ್ಲಿ ಇದುವರೆಗೆ 2.46 ಲಕ್ಷ ಹೆಕ್ಟೇರ್‌ ಪೂರ್ಣಗೊಂಡಿದೆ. ಹಂಗಾಮಿನ ಮುಖ್ಯ ಬೆಳೆಗಳಾಗಿ ಜಿಲ್ಲೆಯಲ್ಲಿ ಜೋಳ, ಕಡಲೆ, ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ ಬಿತ್ತಲಾಗಿದೆ. ಇದರೊಂದಿಗೆ ಅಲ್ಲಲ್ಲಿ ಕುಸುಬೆ, ಹುರುಳಿ, ಗೋಧಿ ಬಿತ್ತನೆಯಾಗಿದ್ದು, ಈಗಾಗಲೇ ಬೆಳೆಗಳು ಮೇಲೆದ್ದಿದ್ದು, ರೈತರು ಎಡೆ ಹೊಡೆಯುತ್ತಿದ್ದಾರೆ. ಅಲ್ಲಲ್ಲಿ ಬೆಳೆಗಳಿಗೆ ಕೀಟ ಬಾಧೆ ಕಾಣಿಸಿದ್ದು, ಸ್ವಲ್ಪ ಆತಂಕ ಮೂಡಿಸಿವೆ.

ಕಡಲೆ ದಾಖಲೆ ಬಿತ್ತನೆ: ಮುಂಗಾರಿನಲ್ಲಿ ಹೆಸರು ಬೆಳೆಯಲ್ಲಿ ಆದ ನಷ್ಟವನ್ನು ಕಡಲೆಯಲ್ಲಿ ಸರಿ ದೂಗಿಸಿಕೊಳ್ಳುವ ಲೆಕ್ಕಾಚಾರದಲ್ಲಿ ರೈತರಿದ್ದಾರೆ. ಹೀಗಾಗಿ ಈ ಬಾರಿ ಜಿಲ್ಲೆಯಾದ್ಯಂತ ದಾಖಲೆ ಪ್ರಮಾಣದಲ್ಲಿ ಕಡಲೆ ಬಿತ್ತನೆಯಾಗಿದೆ. ಒಟ್ಟು 1.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಇದು ಈಗಾಗಲೇ ಗುರಿ ಮೀರಿ 1.37 ಹೆಕ್ಟೇರ್‌ನಲ್ಲಿ (ಶೇ 114.8) ಬಿತ್ತನೆಯಾಗಿದೆ. ಸದ್ಯ ಸಸಿಗಳು ಹೂವು ಬಿಡುವ ಹಂತದಲ್ಲಿವೆ. ಉತ್ತಮ ಇಳುವರಿ ಲಭಿಸಿದರೆ ಕಡಲೆ ಈ ಬಾರಿ ರೈತರಿಗೆ ಬಂಪರ್‌ ಬೆಲೆ ತಂದುಕೊಡಲಿದೆ.

ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮುಂಗಾರು, ಹಿಂಗಾರು ಹಂಗಾಮು ಸಂಪೂರ್ಣ ಹಾನಿಯಾಗಿತ್ತು. 2016ರ ಮುಂಗಾರಿನಲ್ಲಿ 2.40 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಆದರೆ, ಮಳೆ ಕೊರತೆಯಿಂದ ಇದರಲ್ಲಿ 1.70 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಬಾಡಿ ಹೋಗಿತ್ತು. ಹಿಂಗಾರು ಹಂಗಾಮಿನ 2.53 ಲಕ್ಷ ಹಕ್ಟೇರ್‌ ಬಿತ್ತನೆ ಗುರಿಯಲ್ಲಿ ಶೇ 62 ರಷ್ಟು ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು. 2015ರ ಮುಂಗಾರು ಹಂಗಾಮಿನಲ್ಲೂ 2.16 ಲಕ್ಷ ಹಕ್ಟೇರ್‌ ಪ್ರದೇಶದ ಬೆಳೆ ಒಣಗಿ ಹೋಗಿತ್ತು. ಹಿಂಗಾರಿನಲ್ಲಿ 2.50 ಲಕ್ಷ ಹೆಕ್ಟೇರ್ ಗುರಿ ಪೈಕಿ 2.41 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಮಳೆ ಕೊರತೆಯಿಂದ 2.17 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿತ್ತು.

ಹಿಂಗಾರಿನಲ್ಲಿ ಜಿಲ್ಲೆಯಲ್ಲಿ 67 ಸಾವಿರ ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ 55,916 ಹೆಕ್ಟೇರ್ (ಶೇ83.5) ಬಿತ್ತನೆ ಆಗಿದೆ. 5,061ಹೆಕ್ಟೇರ್‌ನಲ್ಲಿ ಮೆಕ್ಕೆ ಜೋಳ, 7,995 ಹೆಕ್ಟೇರ್‌ನಲ್ಲಿ ಗೋಧಿ, 25,351 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 1,174 ಹೆಕ್ಟೇರ್‌ನಲ್ಲಿ ಕುಸುಬೆ ಮತ್ತು 12,024 ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆ ಆಗಿದೆ.

ಮಳೆ: ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 103 ಮಿಮೀ ಮಳೆಯಾಗಿದೆ. ಅ.1 ರಿಂದ ನವೆಂಬರ್ 18ರವರೆಗೆ ಜಿಲ್ಲೆಯ ವಾಡಿಕೆ ಮಳೆ 146 ಮಿ.ಮೀ.
ಇದರಲ್ಲಿ 43 ಮಿಮೀ ಮಳೆ ಕೊರತೆ ಕಂಡುಬಂದಿದೆ.

* * 

ಹಿಂಗಾರು ಹಂಗಾಮಿನಲ್ಲಿ ಕಡಲೆ ಬಿತ್ತನೆ ಪ್ರದೇಶ ಹೆಚ್ಚಿದೆ. ಕೆಲವೆಡೆ ಕೀಟಬಾಧೆ ಕಾಣಿಸಿದ್ದು, ಕೃಷಿ ಅಧಿಕಾರಿಗಳು ರೋಗ ನಿರ್ವಹಣೆ ಕುರಿತು ರೈತರಿಗೆ ಸಲಹೆ ನೀಡಿದ್ದಾರೆ ಸಿ.ಬಿ. ಬಾಲರೆಡ್ಡಿ ಕೃಷಿ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT