ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿದ್ದಾಜಿದ್ದಿಗೆ ಸಾಕ್ಷಿಯಾದ ಬಬಲೇಶ್ವರ..!

Last Updated 3 ಡಿಸೆಂಬರ್ 2017, 5:28 IST
ಅಕ್ಷರ ಗಾತ್ರ

ವಿಜಯಪುರ: ಚುನಾವಣೆ ಘೋಷಣೆಗೂ ಮುನ್ನವೇ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡ ರಂಗೇರಿತು. ಜಿದ್ದಾಜಿದ್ದಿಯ ಹಣಾಹಣಿ ಆರಂಭಗೊಂಡಿದೆ. ಕಾಂಗ್ರೆಸ್‌–ಬಿಜೆಪಿಯ ಬಾವುಟಗಳು, ಮುಖಂಡರ ಫ್ಲೆಕ್ಸ್‌, ಕಟೌಟ್‌, ಬ್ಯಾನರ್‌ಗಳು ಪೈಪೋಟಿಯ ಮೇಲೆ ರಾರಾಜಿಸಿದವು.

ಎತ್ತ ನೋಡಿದರೂ ಜಾಹೀರಾತು ಫಲಕಗಳು. ಮೈ ಕೊರೆವ ಚಳಿಯನ್ನು ಲೆಕ್ಕಿಸದೆ ಚುನಾವಣಾ ಕಾವು ಬಿಸಿಯೇರುತ್ತಿದೆ. ಪ್ರತಿ ವಿಷಯಕ್ಕೂ ರಾಜಕೀಯ ಥಳುಕು ಹಾಕಿಕೊಳ್ಳುತ್ತಿದೆ.

ಶನಿವಾರ (ಡಿ 2) ತಿಕೋಟಾದಲ್ಲಿ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ನಡೆದರೆ, ವಿಜಯಪುರದಲ್ಲಿ ಕಾಂಗ್ರೆಸ್‌ ಪ್ರಾಯೋಜಿತ ಪಂಚಮಸಾಲಿ ಸಮಾಜದ ಪ್ರತಿಭಟನೆ ನಡೆಯಿತು.

ಪರಿವರ್ತನಾ ಯಾತ್ರೆ ಸ್ವಾಗತಿಸಲು ಚುಮುಚುಮು ಚಳಿಯಲ್ಲೇ ಬಿಜೆಪಿ ಕಾರ್ಯಕರ್ತರು, ಕ್ಷೇತ್ರದ ಎಲ್ಲೆಡೆಯಿಂದ ಬೈಕ್‌ಗಳಲ್ಲಿ ವಿಜಯಪುರಕ್ಕೆ ತಂಡೋಪ ತಂಡವಾಗಿ ಬಂದರು. ಇದರ ಜತೆಗೆ ಅಸಂಖ್ಯಾತ ವಾಹನಗಳಲ್ಲಿ ಕಾಂಗ್ರೆಸ್‌ ಬಾವುಟ ಹಿಡಿದಿದ್ದ ಜನರ ತಂಡವು ವಿಜಯಪುರಕ್ಕೆ ಒಟ್ಟಿಗೆ ಪ್ರತಿಭಟನೆಗಾಗಿ ಬಂದಿದ್ದು ರಸ್ತೆಯುದ್ದಕ್ಕೂ ಗೋಚರಿಸಿತು.

ಚಿಮ್ಮಿದ ನೀರು: ಬಿಜೆಪಿ ಆಯೋಜಿಸಿದ್ದ ಪರಿವರ್ತನಾ ರ‍್ಯಾಲಿಯ ಸಮಾವೇಶದ ವೇದಿಕೆಯಿಂದ ಕಣ್ಣಳತೆಯ ದೂರದಲ್ಲೇ ಶನಿವಾರ ಮುಂಜಾನೆಯಿಂದ 40 ಅಡಿ ಎತ್ತರಕ್ಕೆ ಏರ್‌ ವಾಲ್‌ನಿಂದ ಕೃಷ್ಣೆಯ ನೀರು ಚಿಮ್ಮಿತು. ಇದು ತೀವ್ರ ಚರ್ಚೆಗೆ ಗ್ರಾಸವಾಯಿತು.

‘ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಮ್ಮ ಅಧಿಕಾರ ಬಳಸಿಕೊಂಡು, ಸಮಾವೇಶಕ್ಕೆ ಜಮಾಯಿಸಿದ ಎಲ್ಲರೂ ನಮ್ಮ ಸಾಧನೆ ನೋಡಲಿ ಎಂದೇ ಈ ರೀತಿ ನೀರು ಚಿಮ್ಮುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ಹಿಂದೆ ಯಾವಾಗಲೂ ನೀರು ಈ ರೀತಿ ಗಗನಮುಖಿಯಾಗಿ ಚಿಮ್ಮಿರಲಿಲ್ಲ. ಇದೊಂದು ರಾಜಕೀಯ ನಾಟಕ’ ಎಂದು ಬಿಜೆಪಿ ಕಾರ್ಯಕರ್ತರು ಟೀಕಿಸಿದರು.

ಬಹಿರಂಗಗೊಳ್ಳದ ದಾಖಲೆ: ‘ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ನಡೆಸಿದ್ದಾರೆ ಎನ್ನಲಾದ ಹಗರಣದ ದಾಖಲೆಗಳನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ,ಎಸ್‌.ಯಡಿಯೂರಪ್ಪ ಎರಡನೇ ಬಾರಿಗೂ ಬಿಡುಗಡೆಗೊಳಿಸಲಿಲ್ಲ.

ಅ 23ರಂದು ಹಗರಣಗಳ ದಾಖಲೆ ಬಿಡುಗಡೆ ಮಾಡುವುದಾಗಿ ಬಿಎಸ್‌ವೈ ಘೋಷಿಸಿದ್ದರು. ಆದರೆ ಆಗ ಅನಾರೋಗ್ಯದಿಂದ ಪ್ರತಿಭಟನೆ ಮುಂದೂಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಘಟಕ ತಿಳಿಸಿತ್ತು.

ನಂತರ ಪಾಟೀಲ ಸ್ವಕ್ಷೇತ್ರದಲ್ಲೇ ಅಕ್ರಮದ ದಾಖಲೆ ಬಿಡುಗಡೆ ಮಾಡುವೆ ಎಂದು ಯಡಿಯೂರಪ್ಪ ಗುಡುಗಿದ್ದರು. ಅದರಂತೆ ಶನಿವಾರ ನಡೆದ ಸಮಾವೇಶದಲ್ಲಿ ದಾಖಲೆ ಬಹಿರಂಗಗೊಳ್ಳಬಹುದು ಎಂಬ ನಿರೀಕ್ಷೆ ನೆರೆದಿದ್ದ ಅಪಾರ ಜನಸ್ತೋಮದ್ದಾಗಿತ್ತು. ಆದರೆ ಬಿಎಸ್‌ವೈ ಯಾವುದೇ ಹಗರಣ ಪ್ರಸ್ತಾಪಿಸದಿದ್ದುದು ಹಲ ಆಯಾಮಗಳ ಚರ್ಚೆಗೆ ಗ್ರಾಸವೊದಗಿಸಿತು. ಪರ–ವಿರೋಧದ ವಾಗ್ವಾದವೂ ಬಿಜೆಪಿ ಕಾರ್ಯಕರ್ತರ ನಡುವೆಯೇ ನಡೆಯಿತು.

* * 

ಬಿ.ಎಸ್‌.ಯಡಿಯೂರಪ್ಪ ಅರಿವೆ ಹಾವನ್ನು ಬಿಡುವುದರಲ್ಲಿ ನಿಸ್ಸೀಮರು. ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಇನ್ಯಾವ ದಾಖಲೆ ಬಿಡುಗಡೆಗೊಳಿಸುತ್ತಾರೆ
ಎಂ.ಬಿ.ಪಾಟೀಲ, ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT