ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಯಲ್ಲಿ ಗ್ರಾಮೀಣ ಪ್ರತಿಭೆ ಮಿಂಚು

Last Updated 3 ಡಿಸೆಂಬರ್ 2017, 6:52 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ. ಕೆಲವರು ಎಲೆಮರೆ ಕಾಯಿಯಂತೆ ಸಾಧನೆ ಮಾಡುತ್ತಲೇ ಇದ್ದಾರೆ. ಇಲ್ಲೊಬ್ಬರು ತಮ್ಮ ಅಂಗವೈಕಲ್ಯದ ನಡುವೆಯೂ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ದೇಶ– ವಿದೇಶ ಸುತ್ತಿದ್ದಾರೆ. ಬರೀ ಸುತ್ತಾಟಕ್ಕೆ ಅವರು ನಿಂತಿಲ್ಲ. ಜತೆಗೆ, ಪ್ರಶಸ್ತಿ ಗಳಿಸಿ ಕೊಡಗು ಜಿಲ್ಲೆಯ ಹಿರಿಮೆ– ಗರಿಮೆಯನ್ನು ಹೆಚ್ಚಿಸಿದ್ದಾರೆ. ಅವರೇ ಎಂ.ಮಂದಣ್ಣ.

ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪವನ್ನು ‘ಕೊಡಗಿನ ಕೋಲ್ಕತ್ತಾ’ ಎಂದೇ ಕರೆಯಲಾಗುತ್ತದೆ. ಈ ನೆಲದಿಂದ ಸಾಕಷ್ಟು ಪ್ರತಿಭೆಗಳು ಕ್ರೀಡೆಯಲ್ಲಿ ಮಿಂಚಿದ್ದಾರೆ. ಅವರಲ್ಲಿ ಮಂದಣ್ಣ ವಿಶೇಷವಾಗಿ ಎಲ್ಲರ ಗಮನ ಸೆಳೆಯುತ್ತಾರೆ.

ಕೆದಕಲ್ ಗ್ರಾಮದ ಹಾಲೇರಿಯ ಪೂವಯ್ಯ– ಚೆಂಬವ್ವ ದಂಪತಿಯ ದ್ವಿತೀಯ ಪುತ್ರ ಮಂದಣ್ಣ. ಅವರು ಅಂಗವಿಕಲರಾದರೂ ಸಾಧನೆಗೆ ಅದು ಅಡ್ಡಿಯಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಕೆಲವು ದಿನಗಳಿಂದ ಕ್ರೀಡಾಕ್ಷೇತ್ರದಿಂದ ದೂರ ಉಳಿದಿದ್ದರೂ 32 ವರ್ಷದ ಮಂದಣ್ಣನ ಮನಸ್ಸು ಮಾತ್ರ ಮೈದಾನದತ್ತಲೇ ಓಡುತ್ತಿದೆ.

ಸುಂಟಿಕೊಪ್ಪ ಗ್ರಾಮ ಪಂಚಾ ಯಿತಿಯಲ್ಲಿ ಬುದ್ಧಿಮಾಂದ್ಯ ಮತ್ತು ಅಂಗವಿಕಲರ ಅಭಿ ವೃದ್ಧಿಯ ಸಾರ್ವಜನಿಕ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಪಸ್ವಲ್ಪ ಗೌರವಧನ ಸಿಗುತ್ತಿದೆ. ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಸರ್ಕಾರಿ ಸೌಲಭ್ಯ ಕೊಡಿಸಲು ಮೂಲಕ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.

ಗ್ರಾಮೀಣ ಪ್ರತಿಭೆ ಮುಲುವೇರ ಮಂದಣ್ಣ. ಬಾಲ್ಯದಿಂದಲೂ ಅವರಿಗೆ ಕ್ರೀಡಾಕ್ಷೇತ್ರದ ಮೇಲೆ ಅತೀವ ಆಸಕ್ತಿ. ಆ ಪ್ರತಿಭೆಗೆ ಅವಕಾಶದ ಬಾಗಿಲು ತೆರೆಸಿದ್ದು ಮಾತ್ರ ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಾಲೆ.

ಇದುವರೆಗೂ ಅವರು 27 ಚಿನ್ನ, 8 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಮೊದಲಿಗೆ 2001ರಲ್ಲಿ ಮಡಿಕೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಲ್ಲಿಂದ 2013ರವರೆಗೂ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.

2005ರಲ್ಲಿ ಮಂಗಳೂರಿನಲ್ಲಿ ವಿಶೇಷ ಒಲಿಂಪಿಕ್ಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆದ ಫುಟ್‌ಬಾಲ್‌ ಟೂರ್ನಿಯಲ್ಲಿ ಮಂದಣ್ಣ ಅವರ ನೇತೃತ್ವದ ತಂಡವು ಪ್ರಶಸ್ತಿ ಜಯಿಸಿತ್ತು. 2013ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಅಂಗವಿಕಲರ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಮಂದಣ್ಣ 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಪ್ರಥಮ, 200 ಮೀ ಓಟದಲ್ಲಿ ದ್ವಿತೀಯ ಹಾಗೂ ರಿಲೇಯಲ್ಲಿ ಮೂರನೇ ಸ್ಥಾನಗಳಿಸಿದ್ದರು.

ಸುಂಟಿಕೊಪ್ಪದ ಸ್ವಸ್ಥದಲ್ಲಿ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರಕ್ಕೆ ಪ್ರವೇಶ ಪಡೆದ ಮಂದಣ್ಣ, ವಿಶೇಷ ಶಿಕ್ಷಕರಾದ ಬಿಜು ಅವರ ಮಾರ್ಗದರ್ಶನದಲ್ಲಿ ಫುಟ್‌ಬಾಲ್‌, ವಾಲಿಬಾಲ್, ಕ್ರಿಕೆಟ್, ಷಾಟ್‌ಪಟ್‌ ತರೆಬೇತಿ ಪಡೆದುಕೊಂಡಿದ್ದರು. ಜತೆಗೆ, ಓಟ, ಎತ್ತರ ಜಿಗಿತದಲ್ಲೂ ತರಬೇತಿ ಪಡೆದುಕೊಂಡಿದ್ದರು. ಅವರು ಕ್ರೀಡೆಗೆ ಮಾತ್ರ ಸೀಮಿತವಾಗದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮಿಂಚಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

2007ರಲ್ಲಿ ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಹಾಗೂ 2008ರಲ್ಲಿ ಆಂಧ್ರಪ್ರದೇಶದ ಅನಂತ ಪುರದಲ್ಲಿ ನಡೆದ ಕ್ರಿಕೆಟ್ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಇಂದಿಗೂ ಕ್ರೀಡಾ ಸ್ಫೂರ್ತಿ ಅವರಲ್ಲಿ ತುಡಿಯುತ್ತಿದೆ.

ಉದ್ಯೋಗದ ಭರವಸೆ ನೀಡಿ ಮರೆತ ಸರ್ಕಾರ

ಮಡಿಕೇರಿ: ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಹಿರಿಮೆ ಹೆಚ್ಚಿಸಿದ್ದ ಕ್ರೀಡಾಪಟು ಮಂದಣ್ಣ ಅವರನ್ನು ಸರ್ಕಾರ ಮರೆತಿದೆ. ಟ್ಟಮನೆಯಲ್ಲಿ ವಾಸವಿರುವ ಅವರಿಗೆ ಉದ್ಯೋಗ ಭದ್ರತೆ ಕಾಡುತ್ತಿದೆ. ಪಂಚಾಯಿತಿಯ ಗೌರವಧನ ಹೊರತು ಪಡಿಸಿದರೆ ಬೇರ್‍ಯಾವ ಸೌಲಭ್ಯವೂ ಸಿಕ್ಕಿಲ್ಲ. ಕ್ರೀಡಾ ಕೋಟಾದಡಿ ಉದ್ಯೋಗದ ಭರವಸೆ ನೀಡಿದ್ದರೂ ಸರ್ಕಾರಿ ಉದ್ಯೋಗ ಮಾತ್ರ ದೊರೆತಿಲ್ಲ.

* * 

ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕೆಂದು ಮನಸ್ಸು ಈಗಲೂ ಹಂಬಲಿಸುತ್ತಿದೆ. ಆದರೆ, ಅವಕಾಶಗಳು ಕಡಿಮೆಯಾಗಿವೆ
ಎಂ. ಮಂದಣ್ಣ, ಅಂಗವಿಕಲ ಕ್ರೀಡಾಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT