ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲತೆ ಮರೆಸಿದ ನಿತ್ಯದ ಕಾಯಕ

Last Updated 3 ಡಿಸೆಂಬರ್ 2017, 8:54 IST
ಅಕ್ಷರ ಗಾತ್ರ

ಶಿಗ್ಗಾವಿ: ಅಂಗವಿಕಲರು ಎಂದಾಕ್ಷಣ ಅವರ ಬಗ್ಗೆ ಒಂದು ರೀತಿಯ ನಿರಾಕರಣೆ ಭಾವನೆ ಮೂಡುತ್ತದೆ. ಅವರು ಕೆಲಸಕ್ಕೆ ಬಾರದವರು ಎಂಬ ಮನೋಭಾವ ಇದಕ್ಕೆ ಕಾರಣ. ಆದರೆ, ತಾಲ್ಲೂಕಿನ ಬಂಕಾಪುರದ ಅಂಗವಿಕಲ ಮುತ್ತಣ್ಣ ಮಹಾಲಿಂಗಪ್ಪ ದಳವಾಯಿ ಇದಕ್ಕೆ ಅಪವಾದ. ನಿತ್ಯ ವಿವಿಧ ಕಾಯಕಗಳಲ್ಲಿ ನಿರತರಾಗಿರುವ ಅವರು, ಇತರರಿಗೆ ಮಾದರಿಯಾಗಿದ್ದಾರೆ.

ಮುತ್ತಣ್ಣ ಅವರು ನಾಲ್ಕು ವರ್ಷವಿದ್ದಾಗ, ಪೊಲೀಯೋದಿಂದಾಗಿ ಅವರ ಬಲಗಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಪಿ.ಯು.ಸಿ.ವರೆಗೆ ಓದಿದ ಅವರಿಗೆ, ಬಡತನದ ಕಾರಣದಿಂದಾಗಿ ಮುಂದೆ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಕುಟುಂಬದ ಆರ್ಥಿಕ ಸ್ಥಿತಿ ಚನ್ನಾಗಿಲ್ಲದಿದ್ದರಿಂದ ಅನಿವಾರ್ಯವಾಗಿ ಉದ್ಯೋಗ ಆರಂಭಿಸಬೇಕಾಯಿತು.

‘ಆರಂಭದಲ್ಲಿ ಸೀಮೆಎಣ್ಣೆ ಅಂಗಡಿಯಲ್ಲಿ ಲೆಕ್ಕ ಬರೆಯಲು ಸೇರಿಕೊಂಡೆ. ನಂತರ ಮೊಬೈಲ್‌ ಅಂಗಡಿಗಳಲ್ಲಿ ಕೆಲ ವರ್ಷ ಕೆಲಸ ಮಾಡಿ, ತಂದೆ–ತಾಯಿಗೆ ನೆರವಾದೆ. ಈ ರೀತಿಯ ಕೆಲಸಗಳನ್ನು ಹೆಚ್ಚು ಕಾಲ ನಂಬಿಕೊಳ್ಳಲಾಗದು ಅಂದುಕೊಂಡು, ಸ್ವಂತ ಉದ್ಯೋಗ ಆರಂಭಿಸಲು ನಿರ್ಧರಿಸಿದೆ’ ಎಂದು ಆರಂಭದ ದಿನಗಳನ್ನು ಮುತ್ತಣ್ಣ ನೆನಪಿಸಿಕೊಂಡರು.

‘ಅದೇ ವೇಳೆ ಪುರಸಭೆಯ ಎಸ್‌.ಎಫ್‌.ಸಿ ಯೋಜನೆಯಡಿ ಅಂಗವಿಕಲ ಮೀಸಲಾತಿಯಲ್ಲಿ ಅವರಿಗೆ ತ್ರಿಚಕ್ರ ವಾಹನ ಸಿಕ್ಕಿತು. ಅದನ್ನೇ ಆಸರೆಯಾಗಿ ಮಾಡಿಕೊಂಡು ಮನೆ ಮನೆಗೆ ಹಾಲು ಹಾಕುವ ಕೆಲಸ ಆರಂಭಿಸಿದೆ. ಆರಂಭದಲ್ಲಿ ನಿತ್ಯ ಸುಮಾರ 150ರಿಂದ 200 ಲೀಟರ್‌ ಹಾಲು ಮಾರಾಟ ಮಾಡುತ್ತಿದ್ದೆ. ಪ್ರತಿ ಲೀಟರ್‌ಗೆ ₹1.50 ಪೈಸೆವರೆಗೆ ಲಾಭದಂತೆ, ದಿನಕ್ಕೆ ₹200ರಿಂದ ₹300 ಸಂಪಾದಿಸತೊಡಗಿದೆ. ಇದರಿಂದ ಕುಟುಂಬ ನಿರ್ವಹಣೆ ಸುಲಭವಾಯಿತು’ ಎಂದು ಅವರು ಹೇಳಿದರು.

‘ದಾವಣಗೆರೆಯಿಂದ ಸುಮಾರು  ಮಜ್ಜಿಗೆ ಪಾಕೆಟ್‌ಗಳನ್ನು ತರಿಸಿ ಸುಮಾರು 30 ಹಳ್ಳಿಗಳಿಗೆ ಹೋಗಿ ಮಾರಾಟ ಮಾಡಿ ಬರುತ್ತೇನೆ. ಜತೆಗೆ ತಂಪು ಪಾನೀಯಗಳನ್ನು ಮಾರಾಟ ಮಾಡುತ್ತೇನೆ. ತಿಂಗಳಿಗೆ ನನ್ನ ಖರ್ಚು ಕಳೆದು ₹ 15 ಸಾವಿರ ದುಡಿಯುತ್ತೇನೆ’ ಎಂದು ತಮ್ಮ ಸ್ವಂತ ಉದ್ಯೋಗದ ಬೆಳವಣಿಗೆಯನ್ನು ಬಿಚ್ಚಿಟ್ಟರು.

ಹೈನುಗಾರಿಕೆ: ‘ಪುರಸಭೆಯ ನೆರವಿನಿಂದ ರಿಯಾಯಿತಿ ದರದಲ್ಲಿ ಒಂದು ಹಸು ಖರೀದಿಸಿದೆ. ಅದರೊಂದಿಗೆ ಸ್ವಂತವಾಗಿ ಎರಡು ಹಸುಗಳನ್ನು ಸಾಕಿದ್ದೇನೆ. ಅವುಗಳಿಂದ ನಿತ್ಯ 5–6 ಲೀಟರ್‌ ಹಾಲನ್ನು ಡೇರಿಗೆ ಹಾಕುತ್ತೇನೆ. ನಮಗಿರುವ ಎರಡು ಎಕರೆ ಭೂಮಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಹಾಕಿಸಿ, ನೀರಾವರಿ ಭೂಮಿ ಮಾಡಿಕೊಂಡು ಕೃಷಿ ಕೂಡ ಮಾಡುತ್ತಿದ್ದೇನೆ’ ಎಂದು ಅವರು ಹೆಮ್ಮೆಯಿಂದ ಹೇಳಿದರು.

‘ಅಂಗವಿಕಲನಾಗಿದ್ದ ಮುತ್ತಣ್ಣ ಮುಂದೆ ಹೇಗೆ ಬದುಕು ಹೇಗೆ ಸಾಗಿಸಬಲ್ಲ ಎಂಬ ಆತಂಕ ಕಾಡುತ್ತಿತ್ತು. ಆದರೆ, ಇಂದು ಇಡೀ ಕುಟುಂಬವನ್ನು ಅವನೇ ಮುನ್ನಡೆಸುತ್ತಿರುವುದನ್ನು ಕಂಡು ಹೆಮ್ಮೆ ಎನಿಸುತ್ತಿದೆ’ ಎಂದು ಮುತ್ತಣ್ಣನ ತಂದೆ ಮಹಾಲಿಂಗಪ್ಪ ಅವರು ಹೇಳುವಾಗ ಅವರ ಕಣ್ಣುಗಳು ತುಂಬಿ ಬಂದವು.

* * 

ಅಂಗವಿಕಲತೆ ದೇಹಕ್ಕೇ ಹೊರತು, ಮನಸ್ಸಿಗಲ್ಲ ಅಂದುಕೊಂಡು ಬದುಕನ್ನು ಸವಾಲಾಗಿ ಸ್ವೀಕರಿಸಬೇಕು. ಜನ ಅಂಗವಿಕಲರಿಗೆ ಅನುಕಂಪ ತೋರಿಸುವ ಬದಲು, ಅವರು ಮಾಡುವ ಕೆಲಸಗಳನ್ನು ಪ್ರೋತ್ಸಾಹಿಸಬೇಕು
ಮುತ್ತಣ್ಣ ದಳವಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT