ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಈದ್ ಮಿಲಾದ್ ಮೆರವಣಿಗೆ

Last Updated 3 ಡಿಸೆಂಬರ್ 2017, 9:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಇಲ್ಲಿ ಭವ್ಯ ಮೆರವಣಿಗೆ ನಡೆಯಿತು. ಭಕ್ತಿ ಭಾವದಿಂದ ಹೆಜ್ಜೆ ಹಾಕಿದ ಮುಸ್ಲಿಮರು ಈದ್ ಮಿಲಾದ್‌ ಅನ್ನು ಸಂಭ್ರಮದಿಂದ ಆಚರಿಸಿದರು.

ಅಸರ್‌ ಮೊಹಲ್ಲಾ, ಜೆ.ಜೆ.ಹಟ್ಟಿ, ನೆಹರೂ ನಗರ, ಚೇಳುಗುಡ್ಡ, ಕೆಳಗೋಟೆ, ಫಿಲ್ಟರ್‌ ಹೌಸ್ ರಸ್ತೆ ಸೇರಿದಂತೆ ಮುಸ್ಲಿಮರು ಹೆಚ್ಚಾಗಿರುವ ನಗರದ ವಿವಿಧೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿವಿಧ ಕಡೆಗಳಲ್ಲಿ ಹಸಿರು ಮತ್ತು ಬಿಳಿ ವರ್ಣದ ಬಟ್ಟೆಗಳನ್ನು ಕಟ್ಟಿ ಸಿಂಗರಿಸಲಾಗಿತ್ತು.

ಎಸ್‌ಬಿಎಂ ವೃತ್ತದ ಬಳಿ ನೆರೆದ ಸಾವಿರಾರು ಮುಸ್ಲಿಮರು ಮೆರವಣಿಗೆಗೆ ಮೆರುಗು ತಂದರು. ಯುವಕರು ಹಸಿರು ಬಾವುಟ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿದರು. ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿ ಸಂಭ್ರಮಿಸಿದರು. ಕೆಲವರು ಅಲ್ಲಲ್ಲಿ ಜ್ಯೂಸ್, ಕುಡಿಯುವ ನೀರು, ಹಣ್ಣು ವಿತರಿಸಿದರು.

ಧಾರ್ಮಿಕತೆ ಕಡೆ ಸಾಗಿ: ‘ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ, ಕಾನೂನು ಕಾಪಾಡಬೇಕಾದರೆ, ಪ್ರತಿಯೊಬ್ಬರು ಧಾರ್ಮಿಕತೆ ಕಡೆ ಸಾಗಬೇಕು’ ಎಂದು ಛಲವಾದಿ ಗುರುಪೀಠದ ಬಸವನಾಗೀದೇವ ಸ್ವಾಮೀಜಿ ಹೇಳಿದರು.

ಸಂತೆಹೊಂಡದ ಸಮೀಪದಲ್ಲಿ ಶನಿವಾರ ಜಟಕಾಗಾಡಿ ಮಾಲೀಕರ ಮತ್ತು ಚಾಲಕರ ಕ್ಷೇಮಾಭಿವೃದ್ದಿ ಸಂಘ, ಎತ್ತಿನಗಾಡಿ ಮಾಲೀಕರ ಮತ್ತು ಚಾಲಕರ ಸಂಘ, ಗುಜರಿ ಯುವಕರ ಸಂಘದಿಂದ ಹಮ್ಮಿಕೊಂಡಿದ್ದ ಈದ್ ಮಿಲಾದ್ ಹಬ್ಬದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಪ್ರತಿ ಧರ್ಮಕ್ಕೂ ಅದರದ್ದೇ ಆದ ಸಂಪ್ರದಾಯವಿದೆ. ಆದರೆ, ಮನೆಯಿಂದ ಹೊರಗೆ ಬಂದ ಮೇಲೆ ಸಂವಿಧಾನವನ್ನು ಗೌರವಿಸಬೇಕು ಎಂದರು. ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರನ್ನು ಕೇವಲ ಮುಸ್ಲಿಂ ಜನಾಂಗಕ್ಕೆ ಮಾತ್ರ ಸೀಮಿತಗೊಳಿಸಬಾರದು ಎಂದರು.

ಪವಿತ್ರ ಪಾರ್ಥನಾ ಮಂದಿರದ ಧರ್ಮಗುರು ಫಾಲ ಪ್ರವೀಣ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್, ಕಾಂಗ್ರೆಸ್ ಮುಖಂಡ ಮೆಹಬೂಬ್ ಪಾಷಾ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಬಾಷಾ, ವಕೀಲ ಬಿ.ಕೆ.ರಹಮತ್‌ ವುಲ್ಲಾ, ವಾಣಿಜ್ಯೋದ್ಯಮಿ ಎಂ.ಕೆ.ತಾಜ್‌ಪೀರ್, ಸೈಯದ್ ಅಲ್ಲಾಭಕ್ಷ್, ಆರತಿ ಮಹಡಿ ಶಿವಮೂರ್ತಿ, ನಗರಸಭೆ ಸದಸ್ಯ ಖಾದರ್‌ಖಾನ್, ಮಹಡಿ ಶಿವಮೂರ್ತಿ, ವಲಿಖಾದ್ರಿ ಇದ್ದರು.

ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲೂ ಕೆಲ ಮುಸ್ಲಿಂ ಸಂಘ ಸಂಸ್ಥೆಗಳಿಂದ ಈದ್ ಮಿಲಾದ್ ಆಚರಿಸಲಾಯಿತು. ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ ಮುಸ್ಲಿಂ ಸಮುದಾಯದವರಿಗೆ ಸಿಹಿ ವಿತರಿಸುವ ಮೂಲಕ ಹಬ್ಬದ ಶುಭಾಶಯ ಕೋರಿದರು. ರಾಜ್ಯ ಮುಸ್ಲಿಂ ಸರ್ಕಾರಿ ನೌಕರರ ವೆಲ್‌ಫೇರ್ ಅಸೋಸಿಯೇಷನ್‌ನಿಂದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.

ಗೌರವಾಧ್ಯಕ್ಷ ಸೈಯದ್ ಅಫಾಖ್ ಅಹಮ್ಮದ್, ಅಧ್ಯಕ್ಷ ಇಕ್ಬಾಲ್ ಹುಸೇನ್, ಉಪಾಧ್ಯಕ್ಷ ಮಹಮ್ಮದ್ ಷಫಿ, ಕಾರ್ಯದರ್ಶಿ ಕೆ.ಅಬ್ದುಲ್ ಅಬೀದ್ ಬೇಗ್, ಜಂಟಿ ಕಾರ್ಯದರ್ಶಿ ಮಹಮ್ಮದ್ ರಫಿ, ಸಂಘಟನಾ ಕಾರ್ಯದರ್ಶಿ ಜಾವೀದ್‌ಖಾನ್, ಪದಾಧಿಕಾರಿಗಳಾದ ಸೈಯದ್ ಜಾಫರ್, ಉಮ ಶರೀಫ್, ಮಹಮ್ಮದ್ ರಫಿ ಇದ್ದರು.

ಧರ್ಮಪುರ
‘ಮಹಮ್ಮದ್‌ ಪೈಗಂಬರರು ಪ್ರೀತಿಯ, ಶಾಂತಿಯ ಸಹಬಾಳ್ವೆಯ ಸಂಕೇತವಾಗಿದ್ದಾರೆ. ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಯೋತ್ಪಾದನೆಯಂತಹ ಚಟುವಟಿಕೆಗಳಿಂದ ದೂರ ಇರಬೇಕು’ ಎಂದು ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಹಜರತ್ ಸೈಯದ್ ಇಮ್ರಾನ್ ರಜ್ವಿ ಹೇಳಿದರು.

ಈದ್ ಮಿಲಾದ್ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನೂರಾರು ಮಕ್ಕಳು ಸೇರಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಧರ್ಮಪುರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಸಿಹಿ ಹಂಚಿದರು.

ಜಾಮಿಯಾ ಮಸೀದಿಯ ಮುತುವಲಿ ಲಿಯಾಕತ್‌ ಖಾನ್‌, ಜಿಲಾನ್ ಖಾನ್, ಡಿ.ವಿ.ಎಸ್.ಫಯಾಜ್, ಮಹಮ್ಮದ್ ಮುಸ್ಲಿಂ, ಸೈಯದ್‌ ಪಾಷಾ, ದಾದಾಪೀರ್, ಅಸ್ಲಾಂಖಾನ್, ಸಾದಿಕ್ ಅಲಿ, ಅಲ್ಲಾಭಕ್ಷ, ಅಮಾನ್, ಸಾಲೇಹ, ಅತಾವುಲ್ಲಾ, ಇಲಿಯಾಸ್‌ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT