ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿ ಕಾಲಿನಲ್ಲಿ ಕಟ್ಟಿಕೊಂಡ ಬದುಕು

Last Updated 3 ಡಿಸೆಂಬರ್ 2017, 9:34 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ಕಲ್ಲೂಡಿ ಗ್ರಾಮದ ಗಂಗಾಧರಪ್ಪ ಅವರು ತಮ್ಮ ಅಂಗವೈಕಲ್ಯವನ್ನು ಮೆಟ್ಟಿ ನಿಂತು, ಒಂಟಿ ಕಾಲಿನಲ್ಲಿಯೇ ಸೈಕಲ್ ಶಾಪ್ ನಡೆಸುವ ಮೂಲಕ ‘ಅಂಗವಿಕಲತೆ ತನಗೊಂದು ಶಾಪ’ ಎಂದು ಪರಿತಪಿಸುವವರಿಗೆ ಮಾದರಿಯಾಗಿ ಬಾಳುತ್ತಿದ್ದಾರೆ.

ಚಿಕ್ಕಂದಿನಲ್ಲೇ ಪೋಲಿಯೊ ದಿಂದಾಗಿ ಒಂದು ಕಾಲು ಕಳೆದುಕೊಂಡಿರುವ ಗಂಗಾಧರಪ್ಪ ಅವರು ಅದಕ್ಕಾಗಿ ವಿಧಿಯನ್ನು ಹಳಿಯುತ್ತ ಕುಳಿತುಕೊಳ್ಳುವ ಬದಲು ಜೀವನನ್ನು ಸವಾಲಾಗಿ ಸ್ವೀಕರಿಸಿ, ಆತ್ಮವಿಶ್ವಾಸದಿಂದ ಸ್ವಾವಲಂಬಿ ಬದುಕು ರೂಪಿಸಿಕೊಂಡು ಆದರ್ಶ ವ್ಯಕ್ತಿಯಾಗಿದ್ದಾರೆ.

ಎಂಟನೇ ತರಗತಿ ವರೆಗೆ ಓದಿರುವ ಗಂಗಾಧರಪ್ಪ ಅವರು ಚಿಕ್ಕಂದಿನಿಂದಲೇ ವಾಟದ ಹೊಸಹಳ್ಳಿ ಗ್ರಾಮದಲ್ಲಿ ಬೇರೊಬ್ಬರ ಪಂಚರ್ ಶಾಪ್‌ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅಂಗವಿಕಲರಿಗೆ ತುಸು ಕಷ್ಟ ಎನಿಸುವ ಕೆಲಸವನ್ನು ಕೂಡ ಅವರು ಛಲ ಬಿಡದೆ ಕಲಿತು, ದೇಹ ಸಹಕರಿಸದಿದ್ದರೂ ಸಂಕಲ್ಪದ ಮುಂದೆ ಯಾವುದೂ ಅಸಾಧ್ಯವಿಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ಊರುಗೋಲಿನ ಸಹಾಯವಿಲ್ಲದೆ ಸೈಕಲ್, ದ್ವಿಚಕ್ರವಾಹನ ಓಡಿಸುವ ಗಂಗಾಧರಪ್ಪ ಅವರು ಎಚ್‌.ಡಿ.ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನತಾ ದರ್ಶನದಲ್ಲಿ ಅವರನ್ನು ಭೇಟಿ ಮಾಡಿ ಆರ್ಥಿಕ ನೆರವಿಗೆ ಕೋರಿಕೊಂಡಿದ್ದರು. ಕುಮಾರಸ್ವಾಮಿ ಅವರು ನೀಡಿದ ₹ 9 ಸಾವಿರವನ್ನೇ ಬಂಡವಾಳ ಮಾಡಿಕೊಂಡು ಕಲ್ಲೂಡಿ ಗ್ರಾಮದ ಬಿ.ಎಚ್.ರಸ್ತೆಯಲ್ಲಿ ಅಂಗಡಿ ಯೊಂದನ್ನು ಬಾಡಿಗೆ ಪಡೆದು ಸ್ವಂತ ಸೈಕಲ್ ಶಾಪ್ ಆರಂಭಿಸಿದರು.

‘ಸೈಕಲ್ ಮತ್ತು ದ್ವಿಚಕ್ರ ವಾಹನಗಳಿಗೆ ಪಂಚರ್ ಹಾಕಿ ದಿನಕ್ಕೆ ₹ 300 ಸಂಪಾದಿಸುವೆ. ಅದರಲ್ಲಿ ಖರ್ಚು ಕಳೆದು ₹ 200 ಉಳಿಯುತ್ತದೆ. ಅವರಿವರ ಬಳಿ ಕೈಚಾಚಿ ಭಿಕ್ಷೆ ಬೇಡುವ ಬದಲು ಇಂತಹ ಸ್ವಾಭಿಮಾನದ ಬದುಕು ಮೇಲಲ್ಲವೇ’ ಎಂದು ಅವರು ಪ್ರಶ್ನಿಸುತ್ತಾರೆ.

‘ದ್ವಿಚಕ್ರವಾಹನದ ರಿಮ್‌ನಿಂದ ಟ್ಯೂಬ್ ಬೇರ್ಪಡಿಸುವುದು ಸಾಮಾನ್ಯ ಜನರಿಗೆ ತುಸು ಕಷ್ಟ. ಅಂತಹದ್ದನ್ನು ಗಂಗಾಧರಪ್ಪ ಅವರು ಯಾರ ನೆರವು ಪಡೆಯದೆ ಸುಲಭವಾಗಿ ಮಾಡುವುದು ನೋಡಿ ಗ್ರಾಮಸ್ಥರು ಹುಬ್ಬೇರಿಸುತ್ತಾರೆ. ಅಂಗವಿಕಲತೆ ದೇಹಕ್ಕೆ ವಿನಾ ಮನಸ್ಸಿಗೆ ಅಲ್ಲ ಎನ್ನುವ ಮಾತಿಗೆ ಇವರೇ ಸಾಕ್ಷಿ’ ಎಂದು ಗ್ರಾಮಸ್ಥ ಆನಂದ್ ಹೇಳಿದರು.

ಗಂಗಾಧರಪ್ಪ ಅವರಿಗೆ ಮದುವೆಯಾಗಿ ಒಂದು ಮಗುವಿದೆ. ತಮ್ಮ ಅಲ್ಪ ಸಂಪಾದನೆಯಲ್ಲೇ ಅವರು ಪುಟ್ಟ ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದಾರೆ. ಪರಿಶಿಷ್ಟ ಜನಾಂಗಕ್ಕೆ ಸೇರಿದ ಇವರಲ್ಲಿ ಉಚಿತ ಬಸ್‌ಪಾಸ್ ಬಿಟ್ಟರೆ ಈವರೆಗೆ ಸರ್ಕಾರದ ಯಾವುದೇ ಸವಲತ್ತು ದೊರೆತಿಲ್ಲ ಎನ್ನುವ ನೋವು ಮನೆ ಮಾಡಿದೆ.

ಟೈರ್‌ಗಳಿಗೆ ಗಾಳಿ ತುಂಬುವ ಯಂತ್ರ ಮತ್ತು ರಿಮ್‌ನಿಂದ ಟೈರ್‌ ಬೇರ್ಪಡಿಸುವ ಯಂತ್ರವನ್ನು ಸರ್ಕಾರ ಯಾವುದಾದರೂ ಯೋಜನೆಯಲ್ಲಿ ದೊರಕಿಸಿಕೊಟ್ಟರೆ ಬದುಕಿಗೊಂದು ಊರುಗೋಲು ಸಿಕ್ಕಷ್ಟು ಸಂತಸವಾಗುತ್ತದೆ ಎನ್ನುತ್ತಾರೆ ಗಂಗಾಧರಪ್ಪ. ಇವರ ಈ ಸ್ವಾಭಿಮಾನದ ಬದುಕು, ಪ್ರಾಮಾಣಿಕತೆಗೆ ಮನಸೋತಿರುವ ಜನರು ಅಂಗವಿಕಲರ ಕಲ್ಯಾಣಕ್ಕೆ ಶ್ರಮಿಸುವ ಇಲಾಖೆಗಳು ಗಂಗಾಧರಪ್ಪ ಅವರಿಗೆ ನೆರವಿಗೆ ಧಾವಿಸಲು ಎಂದು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT