ಪಾಂಡವಪುರ: ತಾಲ್ಲೂಕಿನ ಪ್ರವಾಸಿ ತಾಣ ಕೆರೆತೊಣ್ಣೂರಿನ ಅಭಿವೃದ್ಧಿಗೆ ಕ್ರಮವಹಿಸಿದ್ದು, ಡಿ.7ರಂದು ₹ 8 ಕೋಟಿ ಅಂದಾಜು ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರೀಯ ರಸ್ತೆ ನಿಧಿಗೆ ಮನವಿ ಪತ್ರ ಸಲ್ಲಿಸಿ ₹ 8 ಕೋಟಿ ಬಿಡುಗಡೆಯಾಗಿದೆ. ಸಂಸದ ಸಿ.ಎಸ್.ಪುಟ್ಟರಾಜು ಇದು ತಮ್ಮ ಪ್ರಯತ್ನ ಎಂದು ಹೇಳಿಕೊಳ್ಳುವುದು ವಿಷಾದನೀಯ ಎಂದರು.
ಪ್ರವಾಸಿ ತಾಣ ಕೆರೆತೊಣ್ಣೂರಿನ ಸೌಂದರ್ಯದ ಅಭಿವೃದ್ದಿಗೂ ಕ್ರಮವಹಿಸಲಾಗಿದೆ ಎಂದರು. ಸಂಸದ ಸಿ.ಎಸ್.ಪುಟ್ಟರಾಜು ಅವರು ಕೆರೆತೊಣ್ಣೂರು ಗ್ರಾಮವನ್ನು ಆದರ್ಶ ಗ್ರಾಮವೆಂದು ಘೋಷಿಸಿ ಅಭಿವೃದ್ದಿಗೆ ಚಾಲನೆ ನೀಡಿ ಸುಮಾರು 3 ವರ್ಷಗಳೇ ಕಳೆದರೂ ಒಂದೇ ಒಂದು ಅಭಿವೃದ್ದಿ ಕಂಡಿಲ್ಲ ಎಂದು ಟೀಕಿಸಿದರು.