ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ಮೇದಾರ ಕೇತಯ್ಯ ದಿನಾಚರಣೆ

Last Updated 4 ಡಿಸೆಂಬರ್ 2017, 5:06 IST
ಅಕ್ಷರ ಗಾತ್ರ

ರಾಯಚೂರು:‘ಕಾಯಕನಿಧಿ ಮೇದಾರ ಕೇತಯ್ಯ ಅವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಭರವಸೆ ನೀಡಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಮೇದಾರ ಸಂಘ, ತಾಲ್ಲೂಕು ಘಟಕ ಭಾನುವಾರ ಹಮ್ಮಿಕೊಂಡಿದ್ದ ಕಾಯಕನಿಧಿ ಮೇದಾರ ಕೇತಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ಸಾಮಾಜಿಕ ನ್ಯಾಯ ಬಹಳ ಮುಖ್ಯವಾದುದು. ಎಲ್ಲ ಜಾತಿಯವರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಮುಖ್ಯಮಂತ್ರಿಯವರು ಜಯಂತಿಗಳನ್ನು ಸರ್ಕಾರದಿಂದ ಆಚರಣೆ ಮಾಡಲು ಅವಕಾಶ ನೀಡಿದ್ದಾರೆ. ಆದ್ದರಿಂದ, ಕೇತಯ್ಯ ಅವರ ಜಯಂತಿ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಸರ್ಕಾರದಿಂದ ಆಚರಣೆ ಮಾಡಲು ಪ್ರಯತ್ನ ಮಾಡ ಲಾಗುವುದು ಎಂದರು.

ಬಸವಣ್ಣನವರ ತತ್ವಗಳ ಆಧಾರದ ಮೇಲೆ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರು ಸರ್ವರಿಗೆ ಸಮಪಾಲು– ಸಮಬಾಳು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ತಿಳಿಸಿದರು.

ಸಂಸದ ಬಿ.ವಿ.ನಾಯಕ ಮಾತ ನಾಡಿ, ಸರ್ಕಾರ ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಹೆಚ್ಚಿನ ಅನುದಾನವೂ ಒದಸಿದೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಅಭಿವೃದ್ಧಿ ಹೊಂದಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಮೇದಾರ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಸಣ್ಣ ಸಮಾಜಗಳು ಸಂಘಟಿತರಾದಾಗ ಸರ್ಕಾರಗಳು ಜನರ ಬಳಿಗೆ ಬಂದು ಕೆಲಸ ಮಾಡುತ್ತವೆ ಎಂದು ತಿಳಿಸಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಸ್ಮಿತಾ ಮಾತನಾಡಿ, ಜಾತಿ ಹಾಗೂ ಧರ್ಮಗಳು ಸಮಾಜದಲ್ಲಿನ ವ್ಯವಸ್ಥೆಗಳಾಗಿದ್ದು, ಜ್ಞಾನ ಸಂಪಾದನೆ ಮಾಡುವ ಮೂಲಕ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.

ದೇವದುರ್ಗದ ಅರವಿನ ಮನೆಯ ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ. ಪಂ. ಸದಸ್ಯ ಎನ್.ಕೇಶವರೆಡ್ಡಿ, ಸಾಹಿತಿ ವೀರ ಹನುಮಾನ್‌, ನಗರಸಭೆ ಸದಸ್ಯ ಶಾಲಂ, ರವೀಂದ್ರ ಜಲ್ದಾರ್‌, ಜಯವಂತರಾವ್‌ ಪತಂಗೆ, ಮೇದಾರ ಸಮಾಜದ ಮುಖಂಡರಾದ ಎಂ.ಲಕ್ಷ್ಮಣ್, ಗೋವಿಂದ, ಶಂಕರ, ಮಹಾದೇವ ಇದ್ದರು.

ಮೆರವಣಿಗೆ
ಕಾಯಕನಿಧಿ ಮೇದಾರ ಕೇತಯ್ಯ ಅವರ ಭಾವಚಿತ್ರ ಮೆರವಣಿಗೆ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ನಗರದ ವಿವಿಧ ರಸ್ತೆಗಳ ಮೂಲಕ ರಂಗಮಂದಿರದವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಕಲಾ ತಂಡಗಳು ಹಾಗೂ ಕುಂಭ–ಕಳಸ ಹೊತ್ತ ಮಹಿಳೆಯರು ಮೆರಗು ತಂದರು.

* * 

ಸಮಾಜದವರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸರ್ಕಾರ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು.
ಎನ್‌.ಎಸ್.ಬೋಸರಾಜು ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT