ಉಡುಪಿ: ಗಂಗಾಜಲಕ್ಕಿಂತಲೂ ದೇವರ ನಾಮಸ್ಮರಣೆ ಶ್ರೇಷ್ಠ. ಸಾಮೂಹಿಕ ಪ್ರಾರ್ಥನೆಯ ಮೂಲಕ ಲೋಕಕಲ್ಯಾಣ ಸಾಧ್ಯ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.
ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನ ಮಂಗಳೂರು, ಪರ್ಯಾಯ ಪೇಜಾವರ ಮಠ, ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಸಹಯೋಗದಲ್ಲಿ ಭಾನುವಾರ ರಾಜಾಂಗಣದಲ್ಲಿ ನಡೆದ ಕೃಷ್ಣಾ ಎನಬಾರದೇ ಹರಿದಾಸವಾಣಿಯ ಸಾಮೂಹಿಕ ಕಲಿಕೆ-ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಗವಂತನ ನಾಮಸ್ಮರಣೆಯಿಂದ ಪಾಪ ಪರಿಹಾರ. ಮನುಷ್ಯರು ಗೊತ್ತಿಲ್ಲದೆ ಮಾಡುವ ಪಾಪಗಳಿಗೆ ಮಾತ್ರ ಇದು ಅನ್ವಯ ಎಂದರು.
ಪರ್ಯಾಯ ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂಗಳೂರು ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಗುರುರಾಜ್, ಜಿಲ್ಲಾ ಭಜನಾ ಒಕ್ಕೂಟದ ಅಧ್ಯಕ್ಷ ಭೋಜರಾಜ್, ಕಾರ್ಯಾಧ್ಯಕ್ಷ ಮಧು ಸುವರ್ಣ, ಪ್ರಧಾನ ಕಾರ್ಯದರ್ಶಿ ಎ. ಶಿವಕುಮಾರ್, ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸಂಗೀತ ನಿರ್ದೇಶಕ ಎಂ.ಎಸ್.ಗಿರಿಧರ್ ತಂಡದಿಂದ ಹರಿದಾಸವಾಣಿಯ ಕಲಿಕೆ ಮತ್ತು ಗಾಯನ ನಡೆಯಿತು. ಪಲಿಮಾರು ಮಠದ ತತ್ವ ಸಂಶೋಧನಾ ಸಂಸತ್ ನಿರ್ದೇಶಕ ಡಾ. ವಂಶೀಕಷ್ಣಾಚಾರ್ಯ ದಾಸ ಸಾಹಿತ್ಯದ ಉಗಮ ಮತ್ತು ವೈಶಿಷ್ಯದ ಬಗ್ಗೆ ಉಪನ್ಯಾಸ ನೆರವೇರಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಭಜನಾ ಮಂಡಳಿಗಳ ಒಕ್ಕೂಟದ 2,000ಕ್ಕೂ ಅಧಿಕ ಮಂದಿ ಸದಸ್ಯರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.