ಬೀಳಗಿ: ‘ಬಡವರು, ಶೋಷಿತ ಸಮುದಾಯದವರು ತಮ್ಮ ಬದುಕಿನಲ್ಲಿ ಸ್ವಾಭಿಮಾನದ ಬೆಳಕು ತುಂಬಿಕೊಳ್ಳಲು ಮೂಢನಂಬಿಕೆ, ಮೌಢ್ಯಗಳಿಂದ ಹೊರ ಬರುವುದು ಅಗತ್ಯವಿದೆ’ ಎಂದು ಜಿಲ್ಲಾ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಶ್ರೀಶೈಲ ಅಂಟೀನ ಹೇಳಿದರು.
ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಡಿಸೆಂಬರ 6 ರಂದು ನಡೆಯಲಿರುವ ಮೌಢ್ಯ ವಿರೋಧಿ ಸಂಕಲ್ಪ ದಿನದ ಪ್ರಯುಕ್ತ ಪಟ್ಟಣಕ್ಕೆ ಬಂದ ಜನ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ದೇಶದಲ್ಲಿ ಸಮಾನತೆ, ಸಹೋದರತೆ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ನಾಶಮಾಡಿ ಕಂದಾಚಾರದ ಬಲೆ ಬೀಸಿ ಶೋಷಿತ ಸಮುದಾಯಗಳನ್ನು ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮೂಲೆಗುಂಪು ಮಾಡುವ ಹುನ್ನಾರ ನಡೆದಿದೆ’ ಎಂದು ದೂರಿದರು.
ಅಹಿಂದ ಮುಖಂಡ ಶ್ರೀಶೈಲ ತಳೇವಾಡ, ಪಡಿಯಪ್ಪ ಕರಿಗಾರ, ಅನುವೀರಯ್ಯ ಪ್ಯಾಟಿಮಠ, ಕಾಸಿಮ್ ಅಲಿ ಗೋಠೆ, ಸತೀಶ್ ನಾಯ್ಕರ, ಪಡಿ ಯಪ್ಪ ಕಳ್ಳಿಮನಿ, ಪ್ರಾಚಾರ್ಯ ಎಸ್.ಎಚ್. ತೆಕ್ಕೆಣ್ಣವರ, ವಿ.ಜಿ. ರೇವಡಿಗಾರ, ಅಜ್ಜುಭಾಯಿ ಸರಕಾರ ಇದ್ದರು.